ಮಂಗಳೂರು, ಜೂ. 09 (DaijiworldNews/AA): ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪವಿತ್ರ ಕೊಳದ ಬಳಿ ಬುದ್ಧನ ಅಪರೂಪದ ಶಿಲ್ಪ ಮತ್ತು ಗುಹೆಗಳ ಸಮುಚ್ಚಯವು ಪುರಾತತ್ವ ಆವಿಷ್ಕಾರದ ವೇಳೆ ಪತ್ತೆಯಾಗಿದೆ. ದೇವಸ್ಥಾನದ ಅಧಿಕಾರಿಗಳ ಅನುಮತಿಯೊಂದಿಗೆ ಇತ್ತೀಚೆಗೆ ನಡೆಸಿದ ಪರಿಶೋಧನೆಯಲ್ಲಿ ಈ ಆವಿಷ್ಕಾರ ಮಾಡಲಾಗಿದೆ.

ಕೊಳದಲ್ಲಿ ಮುಳುಗಿದ್ದ ಸ್ಥಿತಿಯಲ್ಲಿ ದೊರೆತ ಈ ಶಿಲ್ಪವು, ಪದ್ಮಾಸನದಲ್ಲಿ (ಧ್ಯಾನ ಮುದ್ರೆ) ಕುಳಿತಿರುವ ಬುದ್ಧನನ್ನು ಚಿತ್ರಿಸುತ್ತದೆ. ವಿಗ್ರಹದ ಬಲಗೈ ಸಂಪೂರ್ಣವಾಗಿ ಮುರಿದಿದ್ದು, ಎಡಗೈ ಅಡ್ಡಲಾಗಿ ಇಟ್ಟ ಕಾಲುಗಳ ನಡುವೆ ಇದೆ. ಭಾಗಶಃ ಕಾಣುವ ಉತ್ತರೀಯ (ಮೇಲು ಹೊದಿಕೆ) ಎಡ ಭುಜ ಮತ್ತು ಎದೆಗೆ ಆವರಿಸಿದೆ. ಶಿಲ್ಪದ ತಲೆ ಕಾಣೆಯಾಗಿದೆ.
ಕದ್ರಿ ದೇವಸ್ಥಾನದ ಹೊರ ಆವರಣದಲ್ಲಿರುವ ಕಂಬಗಳ ಕೆಳ ಫಲಕಗಳಲ್ಲೂ ಪದ್ಮಾಸನದಲ್ಲಿ ಧ್ಯಾನಸ್ಥ ಬುದ್ಧನ ಶಿಲ್ಪಗಳನ್ನು ಕಾಣಬಹುದಾಗಿದೆ. ಹೀಗಾಗಿ ಆವಿಷ್ಕಾರದ ವೇಳೆ ದೊರೆತ ಶಿಲ್ಪವು ಬುದ್ಧನದ್ದೇ ಎಂದು ಹೇಳಲಾಗಿದೆ. ಈ ಪ್ರತಿಮೆಯು 68 ಸೆಂ.ಮೀ ಎತ್ತರ ಮತ್ತು 48 ಸೆಂ.ಮೀ ಅಗಲವಿದ್ದು, ಗೋವಾದ ಮುಷಿರಾ ವಾಡೋದಲ್ಲಿ ಪತ್ತೆಯಾದ ಶಿಲ್ಪವೊಂದನ್ನು ಹೋಲುತ್ತದೆ. ಈ ಶಿಲ್ಪವು ಕ್ರಿ.ಶ. 4ನೇ-6ನೇ ಶತಮಾನಕ್ಕೆ ಸೇರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪದ್ಮಾಸನದ ಬುಡದಲ್ಲಿರುವ ಸಾಕೆಟ್, ಇದು ಒಮ್ಮೆ ಕದ್ರಿಯ ಮುಖ್ಯ ದೇವತೆಯಾಗಿರಬಹುದು ಎನ್ನಲಾಗಿದೆ.
ದೇವಸ್ಥಾನದ ಕೊಳದ ಮೇಲಿರುವ ಸಣ್ಣ ಗುಡ್ಡದ ಮೇಲೆ ಲ್ಯಾಟರೈಟ್ ಕಲ್ಲಿನಲ್ಲಿ ಕೆತ್ತಿದ ಮೂರು ಗುಹೆಗಳು ಪತ್ತೆಯಾಗಿವೆ. ಬಲಬದಿಯ ಗುಹೆಯ ಪ್ರವೇಶದ್ವಾರವು ಬೃಹತ್ ಶಿಲಾಯುಗದ ಸಮಾಧಿಗಳ ಭವ್ಯ ಪ್ರವೇಶದ್ವಾರಗಳನ್ನು ಹೋಲುತ್ತದೆ. ಜೊತೆಗೆ ಅದರ ರಚನೆಯು ಅಂತಹ ಸಮಾಧಿ ಕೊಠಡಿಗಳನ್ನೇ ಹೋಲುತ್ತದೆ. ಎತ್ತರದ ವೇದಿಕೆಗಳ ಮೇಲೆ ಇರುವ ಉಳಿದ ಎರಡು ಗುಹೆಗಳು ಚೌಕಾಕಾರದ ಪ್ರವೇಶದ್ವಾರಗಳನ್ನು ಹೊಂದಿದ್ದು, ಅವುಗಳ ಒಳಭಾಗವು ಸರಳ ಮತ್ತು ಕಟ್ಟುನಿಟ್ಟಾಗಿದೆ. ಪ್ರತಿಯೊಂದು ಗುಹೆಯು ದೀಪಗಳಿಗಾಗಿ ಮೀಸಲಾದ ಜಾಗಗಳನ್ನು ಹೊಂದಿರುವ ಒಂದೇ ಕೋಣೆಯನ್ನು ಹೊಂದಿದೆ. ಈ ಗುಹೆಗಳನ್ನು ವಸತಿ ಅಥವಾ ಧ್ಯಾನದ ಉದ್ದೇಶಕ್ಕಾಗಿ ಬಳಸಲ್ಪಟ್ಟಿರಬಹುದು. ವಾಸ್ತುಶಿಲ್ಪ ಶೈಲಿ ಮತ್ತು ವಿನ್ಯಾಸದ ಆಧಾರದ ಮೇಲೆ, ಈ ಗುಹೆಗಳು ಕೂಡ ಕ್ರಿ.ಶ. 4ನೇ-6ನೇ ಶತಮಾನಕ್ಕೆ ಸೇರಿವೆ ಎಂದು ಅಂದಾಜಿಸಲಾಗಿದೆ.
ಈ ಆವಿಷ್ಕಾರವು ಕದ್ರಿಯ ಐತಿಹಾಸಿಕ ಮಹತ್ವವನ್ನು ಕ್ರಿ.ಶ. 4ನೇ-5ನೇ ಶತಮಾನಕ್ಕೆ ಹಿಂದಕ್ಕೆ ಕೊಂಡೊಯ್ಯುತ್ತದೆ. ವಿದ್ವಾಂಸರ ಪ್ರಕಾರ, ಕದ್ರಿ ಆರಂಭದಲ್ಲಿ ಮಹಾಯಾನ ಬೌದ್ಧ ಕೇಂದ್ರವಾಗಿ ಕಾರ್ಯನಿರ್ವಹಿಸಿದ್ದು, ನಂತರ ವಜ್ರಯಾನ ಕೇಂದ್ರವಾಗಿ ವಿಕಸನಗೊಂಡು ಅಂತಿಮವಾಗಿ ದಕ್ಷಿಣ ಭಾರತದ ಪ್ರಮುಖ ನಾಥ ಸಂಪ್ರದಾಯದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಶಿರ್ವದ ಮೂಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, ದೇವಸ್ಥಾನದ ಆಡಳಿತಾಧಿಕಾರಿ ಅರುಣ್ ಕುಮಾರ್ ಮತ್ತು ಪರಿಶೋಧನೆಯಲ್ಲಿ ಭಾಗವಹಿಸಿದ ಮಣಿಪಾಲ ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ವಾಂಸ ಶ್ರೇಯಸ್ ಕೊಲ್ಪೆ, ಶಿರ್ವದ ಎಂಎಸ್ಆರ್ಎಸ್ ಕಾಲೇಜಿನ ಉಪನ್ಯಾಸಕ ಶ್ರೇಯಸ್ ಬಂಟಕಲ್ಲು ಮತ್ತು ವಿದ್ಯಾರ್ಥಿ ರವೀಂದ್ರ ಕುಶ್ವಾ, ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಕಾರ್ತಿಕ್ ಅವರ ಸಹಕಾರವನ್ನು ಸ್ಮರಿಸಿದ್ದಾರೆ.