ಮಂಗಳೂರು, ಜೂ. 08 (DaijiworldNews/AA): ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ 'ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್'ಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ನಿವಾಸಿ ಮುಹಮ್ಮದ್ ಸುಹೈಲ್ ಈ ಸಂಬಂಧ ದೂರು ನೀಡಿದ್ದಾರೆ.
'ನಾನು ಬೈಕ್ ನಲ್ಲಿ ಸ್ನೇಹಿತನೊಂದಿಗೆ ಮೂಡುಬಿದ್ರೆಯ ಕಡೆಗೆ ಹೋಗುತ್ತಿದ್ದಾಗ, ತಾನು ಅಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದನ್ನು ಯಾರೋ ದುಷ್ಕರ್ಮಿಗಳು ದುರುದ್ದೇಶಪೂರ್ವಕವಾಗಿ ಫೋಟೊ ತೆಗೆದಿದ್ದಾರೆ. ನಂತರ 'ತಲ್ವಾರ್ ಹಿಡಿದ ಬೈಕ್ ಸವಾರರು' ಎಂದು ಫೋಟೊ ಮತ್ತು ವಾಯ್ಸ್ ಕ್ಲಿಪ್ನ್ನು "ಕರಾವಳಿ ಟೈಗರ್ಸ್" ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಳ್ಳುಸುದ್ದಿ ಹರಡಿದ್ದಾರೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೈಕ್ನಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಂಚರಿಸುತ್ತಿರುವುದಾಗಿ ನನ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ಕೋಮು ಪ್ರಚೋದನೆ ನೀಡಿರುವ "ಕರಾವಳಿ ಟೈಗರ್ಸ್" ಇನ್ಸ್ಟಾಗ್ರಾಮ್ ಖಾತೆಯ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸರು, ವಾಟ್ಸಪ್ನಲ್ಲಿ ಹರಿದಾಡಿದ ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್ ತಪ್ಪು ಮಾಹಿತಿಯಾಗಿದೆ. ಇಬ್ಬರು ಯುವಕರು ಮೂಡಬಿದ್ರೆಗೆ ಹೋಗುತ್ತಿದ್ದಾಗ ಹಿಂಬದಿಯ ಸವಾರ ತನ್ನ ಕೈಯಲ್ಲಿ ಆಕ್ಟೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದರು ಎಂದು ತಿಳಿಸಿದ್ದಾರೆ.