ಪುತ್ತೂರು, ಜೂ. 08 (DaijiworldNews/AA): ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಚಿನಹಳ್ಳ ಎಂಬಲ್ಲಿ ರಾ. ಹೆ. 75ರಲ್ಲಿ ಜೂನ್ 7ರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ 16ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದಾಗ ಬಸ್ನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಗಾಯಗೊಂಡವರಲ್ಲಿ ಮೂಡುಬಿದಿರೆಯ ಫಹದ್ (20), ಫರಂಗಿಪೇಟೆಯ ರಂಝೀನ್(25), ದೇರಳಕಟ್ಟೆಯ ಉಮ್ಮರ್ (53), ಪುತ್ತೂರಿನ ತಮೀನ್(19), ಪುತ್ತೂರು ಸಾಲ್ಮರದ ಇಷಾಮ್(19), ಉಪ್ಪಿನಂಗಡಿಯ ರುಕ್ಷ್ಮಯ(24), ಬಂಟ್ವಾಳ ಸಾಲೆತ್ತೂರಿನ ಜಾಹಿರ್(23), ವಿಟ್ಲದ ಶಮೀರ್ (28), ಅನ್ಸಾರ್ (26), ಬೆಂಗಳೂರಿನ ದಾಸರಪುರದ ಸೋಮಶೇಖರ (55), ಶರತ್ (35), ನೆಲಮಂಗಲದ ಡಾ| ಮಹಂತ್ ಗೌಡ (47), ಸಂಪ್ಯದ ಸಿಮಾಕ್ (23), ಅಬ್ದುಲ್ ರಜೀದ್ (38), ಮೂಡುಬಿದಿರೆ ಕೈಕಂಬದ ಪೌಝಿಲ್ (23) ಮತ್ತು ಅಲ್ತಾಫ್(28) ಸೇರಿದ್ದಾರೆ. ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಘಟನೆ ಸಂಭವಿಸಿದಾಕ್ಷಣ ಸ್ಥಳೀಯರು ತಕ್ಷಣವೇ ಧಾವಿಸಿ, ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆಗಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರಲ್ಲಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಂತರ ಪುತ್ತೂರು ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.