ಮಂಗಳೂರು, ಜೂ. 07 (DaijiworldNews/TA): ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಕಾಲೇಜು ದಿನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶುಕ್ರವಾರ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು.

ಈ ವೇಳೆ ಕೆ ಎಂಸಿ ಕಾಲೇಜಿನ ಹಳೆ ವಿದ್ಯಾರ್ಥಿ, ಪದ್ಮಶ್ರೀ, ಡಾ. ಬಿ.ಸಿ. ರಾಯ್ ಪ್ರಶಸ್ತಿ ಪುರಸ್ಕೃತ ಡಾ. ಪಿ. ರಘು ರಾಮ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸರಿಯಾಗಿ 30 ವರ್ಷಗಳ ಹಿಂದೆ ನಾನು ಎಂಎಸ್ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದೆ. ಅದು ನನ್ನ ಜೀವನದ ಒಂದು ಪ್ರಮುಖ ತಿರುವಾಗಿತ್ತು. ಅಂದಿನಿಂದ ಹಿಂತಿರುಗಿ ನೋಡಿಲ್ಲ. ಅಡಿಪಾಯ ಹಾಕಿದ, ನನ್ನ ಪ್ರತಿಭೆಯನ್ನು ಪೋಷಿಸಿದ ಮತ್ತು ನನ್ನ ಕನಸುಗಳಿಗೆ ರೆಕ್ಕೆಗಳನ್ನು ನೀಡಿದ ನನ್ನ ಶಿಕ್ಷಕರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಡಾ. ರಘು ರಾಮ್ ಅವರನ್ನು ಸನ್ಮಾನಿಸಲಾಯಿತು. ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕೆಎಂಸಿ ಮಂಗಳೂರಿನ ಪ್ಲಾಟಿನಂ ಮಹೋತ್ಸವ ಆಚರಣೆಯ ಸ್ಮರಣಾರ್ಥ ವಿಶೇಷ ಅಂಚೆ ಕವರ್ ಅನ್ನು ಗಣ್ಯರು ಬಿಡುಗಡೆ ಮಾಡಿದರು. ಈ ವೇಳೆ ಮಾಹೆಯ ಪ್ರೊ-ಚಾನ್ಸಲರ್ ಡಾ. ಹೆಚ್ ಎಸ್ ಬಲ್ಲಾಳ್, ಡಾ. ದಿಲೀಪ್ ಜಿ ನಾಯಕ್, ಡಾ ಶರತ್ ಕೆ ರಾವ್, ಡಾ. ಸುರೇಶ್ ಕುಮಾರ್, ಡಾ. ಶ್ರೀಕಲಾ ಬಾಳಿಗಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.