ಉಡುಪಿ, ಜೂ. 07 (DaijiworldNews/TA): ಯೂತ್ ಆಫ್ ವಿಶ್ವಕರ್ಮ ಗ್ರೂಪ್ ಆರಂಭವಾಗಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆ ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರ, ಸಾಲ್ಮರ, ಉಳ್ಳೂರು ಗೆ ಭೇಟಿ ನೀಡಿ, ದೀಪ ಬೆಳಗುವ ಮುಖಾಂತರ ವಾರ್ಷಿಕ ಮಹೋತ್ಸವ ಆಚರಿಸಲಾಯಿತು.

ಸಮಾಜದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಸಹೃದಯಿ ಯುವಕರ ತಂಡ ಒಗ್ಗೂಡಿ ಯೂತ್ ಆಫ್ ವಿಶ್ವಕರ್ಮ ಎಂಬ ಯುವ ಸಮಾಜ ಮುಖಿ ತಂಡವನ್ನು ಆರಂಭಿಸಿದರು. ಈ ಒಂದು ವರ್ಷದ ಅವಧಿಯ ಸಮಯದಲ್ಲಿ ಸುಮಾರು 22 ಕುಟುಂಬಕ್ಕೆ 6,70,000 ಕ್ಕೂ ಹೆಚ್ಚು ಧನಸಹಾಯವನ್ನು ಮಾಡಿದ್ದು, ಮುಂದೆಯೂ ಕೂಡ ಇದೇ ರೀತಿಯ ಸಮಾಜಮುಖಿ ಕಾರ್ಯ ಮಾಡುವುದು ಈ ಗ್ರೂಪ್ ನ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಕಾರ್ಯಕ್ರಮದಲ್ಲಿ ಯೂತ್ ಆಫ್ ವಿಶ್ವಕರ್ಮ ಸದಸ್ಯರ ಸಮ್ಮುಖದಲ್ಲಿ ವಿಶೇಷ ಮಕ್ಕಳಿಗೆ ರಾತ್ರಿಯ ಊಟದ ವ್ಯವಸ್ಥೆ ಹಾಗೂ ದಿನನಿತ್ಯ ಬಳಕೆ ಮಾಡುವ ಸಾಮಗ್ರಿ, ಮಕ್ಕಳಿಗೆ ಟಿ-ಶರ್ಟನ್ನು ನೀಡಲಾಯಿತು. ಇದೇ ವೇಳೆ ಅಲ್ಲಿನ ವ್ಯವಸ್ಥಾಪಕರಾದ ಜನಾರ್ಧನ ಎನ್ ಅವರಿಗೆ ಫಲವಸ್ತು ನೀಡಿ ಗೌರವಿಸಲಾಯಿತು.