ಮುರ್ಡೇಶ್ವರ, ಜೂ. 05 (DaijiworldNews/AA): ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಣೆ ಮಾಡುತ್ತಾರೆ. ಈ ದಿನದ ಆಚರಣೆಯ ಇತಿಹಾಸ ನೋಡುವುದಾದರೆ 1972ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮಾನವನ ಪರಿಸರದ ಕುರಿತಾದ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಆಚರಿಸಲು ನಿರ್ಧರಿಸಿ ನಂತರ ಮೊದಲ ವಿಶ್ವ ಪರಿಸರ ದಿನವನ್ನು 1973ರಲ್ಲಿ ಓನ್ಲಿ ಒನ್ ಅರ್ಥ್ ಎಂಬ ವಿಷಯದೊಂದಿಗೆ ಆಚರಿಸಿದರು. ಅದೇ ರೀತಿ ಪ್ರತಿವರ್ಷ ಹೊಸ ಧ್ಯೇಯ ವಾಕ್ಯದೊಂದಿಗೆ ಜೂನ್ 5 ರಂದು ಪರಿಸರ ಸಂರಕ್ಷಣೆ, ಪರಿಸರ ಸ್ನೇಹಿ ಅಭ್ಯಾಸಗಳು, ಅರಣ್ಯನಾಶ ಮತ್ತು ಮಾಲಿನ್ಯವನ್ನು ತಡೆಗಟ್ಟುವುದು, ಪರಿಸರವನ್ನು ರಕ್ಷಿಸಿ ಸುಸ್ಥಿರ ಅಭಿವೃದ್ಧಿ ಮಾಡುವ ಉದ್ದೇಶದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳಾಗಿರಬಹುದು ಅಥವಾ ಪರಿಸರ ದಿನಾಚರಣೆಯಾಗಿರಬಹುದು ಕೇವಲ ಪರಿಸರ ದಿನಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದ್ದೆ. ಮಾನವನ ಅತಿಯಾದ ದುರಾಸೆಯಿಂದ ನೈಸರ್ಗಿಕ ಸಂಪತ್ತುಗಳ ಶೋಷಣೆಯಲ್ಲಿ ತೊಡಗಿದ್ದಾನೆ. ಶಕ್ತಿ ಉತ್ಪಾದನೆ, ಕೈಗಾರಿಕೆಗಳ ಸ್ಥಾಪನೆ, ನಗರೀಕರಣ ಮುಂತಾದವುಗಳು ಪರಿಸರವನ್ನು ನಾಶ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳಿಂದ ಹೊರ ಹೋಗುವ ವಿಷಕಾರಿ ತ್ಯಾಜ್ಯಗಳು ನದಿಗಳಿಗೆ ಸೇರಿ ಜೀವ ವೈವಿಧ್ಯತೆಗಳು ನಾಶವಾಗುತ್ತಿದೆ, ಎಲ್ಲೆಂದರಲ್ಲಿ ಮರ ಕಡಿಯುವುದರಿಂದ ಅರಣ್ಯ ನಾಶವಾಗುತ್ತಿದೆ. ವಾಹನಗಳು, ಕೈಗಾರಿಕೆಗಳಿಂದ ಹೊರಹೊಮ್ಮುವ ಕಾರ್ಬನ್ ಡೈ ಆಕ್ಸ್ಡ್ ನೈಸರ್ಗಿಕ ಗಾಳಿಯನ್ನು ಕೆಡಿಸುತ್ತದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ, ಅಷ್ಟೇ ಅಲ್ಲ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಅನ್ನು ಎಸೆಯುವುದರಿಂದ, ಕಸದ ವಿಲೇವಾರಿಯನ್ನು ಸರಿಯಾದ ಕ್ರಮದಲ್ಲಿ ಪಾಲಿಸದಿದ್ದರಿಂದ ಪರಿಸರ ನಾಶವಾಗುತ್ತಿದೆ. ಪ್ರಕೃತಿ ನಾಶವಾದಂತೆ ಹವಾಮಾನದಲ್ಲಿ ಬದಲಾವಣೆ, ತಾಪಮಾನದಲ್ಲಿ ಹೆಚ್ಚಳ, ಪ್ರವಾಹ, ಗುಡ್ಡಕುಸಿತಗಳು, ಭೂಕಂಪ ಹಾಗೆಯೇ ಮಾಲಿನ್ಯದಿಂದ ಆರೋಗ್ಯ ಸಮಸ್ಯೆಗಳು, ಆಹಾರದ ಸಮಸ್ಯೆಗಳು ಉದ್ಭವಿಸುತ್ತದೆ.
ಮಾನವನ ಸ್ವಾರ್ಥ ಹಾಗೂ ಬೃಹತ್ ಅಭಿವೃದ್ಧಿಯ ಬೇಡಿಕೆಗಳು, ಪ್ರಕೃತಿಯ ನಾಶಕ್ಕೆ ಕಾರಣವಾಗುತ್ತಿವೆ. ಅರಣ್ಯಗಳ ಕಡಿತ, ನದಿಗಳ ಮಾಲಿನ್ಯ, ವಾಯುಮಾಲಿನ್ಯ, ಮಣ್ಣು ವಿನಾಶ ಇವೆಲ್ಲ ಪರಿಸರದ ಸಮತೋಲನವನ್ನು ಹಾಳುಮಾಡುತ್ತಿವೆ. ಇವು ಮುಂದಿನ ಪೀಳಿಗೆಗೆ ಭಾರಿ ನಷ್ಟ ಉಂಟುಮಾಡುತ್ತವೆ. ಆದ್ದರಿಂದ ಪರಿಸರವನ್ನು ರಕ್ಷಿಸುವಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯವಾದುದು.
ಬಾಲ್ಯದಿಂದಲೇ ಪರಿಸರದ ಮಹತ್ವವನ್ನು ಮಕ್ಕಳಿಗೆ ಬೋಧಿಸುವುದರ ಜೊತೆಗೆ ಪೃಕೃತಿಯ ಅನಿವಾರ್ಯದ ಬಗ್ಗೆ ಅರಿವನ್ನು ಮೂಡಿಸುವುದು,ಭೂಮಿ, ಜಲ, ವಾಯು, ಅರಣ್ಯ ಸಂಪತ್ತನ್ನು ಅರ್ಥಪೂರ್ಣವಾಗಿ ಬಳಸುವುದನ್ನು ಮನೆಯ ಮಟ್ಟದಲ್ಲೇ ಉತ್ತೇಜಿಸುವುದು, ಸುತ್ತ ಮುತ್ತಲ ಪರಿಸರವನ್ನು ಸ್ವಚ್ಛವಾಗಿ ನೋಡಿಕೊಳ್ಳುವುದು, ಗಿಡ ವನ್ನು ನೆಡುವುದು ಮಾತ್ರ ವಲ್ಲದೆ ಅವುಗಳ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವುದು, ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ಗಳನ್ನು ಬಳಸುವುದು, ಪರಿಸರ ಸ್ನೇಹಿ ಸಂಸ್ಕೃತಿಯನ್ನು ಅಳವಡಿಸಿ ಕೊಳ್ಳುವುದು, ಮರುಬಳಕೆಗೆ ಹೆಚ್ಚಿನ ಒತ್ತನ್ನು ನೀಡುವುದು, ಪರಿಸರ ಸ್ನೇಹಿ ತಂತ್ರಜ್ಞಾನ ವನ್ನು ಅಭಿವೃದ್ಧಿ ಪಡಿಸಲು ಯುವಜನೆಗೆ ಪ್ರೋತ್ಸಾಹ ನೀಡುವುದು ಹೀಗೆ ಪ್ರತಿದಿನ ಪರಿಸರ ಸ್ನೇಹಿ ನಡೆಯನ್ನು ರೂಡಿಸಿಕೊಂಡಾಗ ಮಾತ್ರ ಪೃಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಪರಿಸರವೇ ನಮ್ಮ ಜೀವನದ ಮೂಲಸ್ತಂಭ. ನಮ್ಮ ದಿನನಿತ್ಯದ ಉಸಿರಾಟ, ಆಹಾರ, ನೀರು ಎಲ್ಲವೂ ಪರಿಸರದ ಕೊಡುಗೆ. ಆದ್ದರಿಂದ, ನಾವು ಪರಿಸರವನ್ನು ಉಳಿಸಲು ಮುಂದಾಗಲೇಬೇಕು. ಇದು ನಮ್ಮ ಕರ್ತವ್ಯವಷ್ಟೇ ಅಲ್ಲ, ಮುಂದಿನ ಪೀಳಿಗೆಗಳಿಗೇ ಬದುಕಿನ ಬಾಳಿಕೆ ಕೊಡುವ ಮಹತ್ವದ ಹೆಜ್ಜೆಯಾಗಿದೆ.
ಅನೇಕ ಶಾಲೆ-ಕಾಲೇಜುಗಳು, ಸಂಸ್ಥೆಗಳು ಪರಿಸರ ದಿನದಂದು ಬೃಹತ್ ಕಾರ್ಯಕ್ರಮಗಳನ್ನು ನಡೆಸುತ್ತವೆ. ಮಕ್ಕಳಿಗೆ ಪರಿಸರದ ಪ್ರಾಮುಖ್ಯತೆಯ ಪಾಠ, ಪೌಷ್ಟಿಕ ಆಹಾರದ ಮಹತ್ವ, ಪ್ಲಾಸ್ಟಿಕ್ ವಿರೋಧಿ ಅಭಿಯಾನ ಇವೆಲ್ಲ ನಡೆಯುತ್ತವೆ. ಆದರೆ ಈ ಚಟುವಟಿಕೆಗಳು ಸ್ವಲ್ಪ ದಿನ ಮಾತ್ರ, ನಂತರ ಮರೆಯಾಗುತ್ತವೆ. ಹಾಗಾಗಬಾರದು ಪರಿಸರದ ಹಿತ ನಮ್ಮ ನಿತ್ಯದ ಬದುಕಿನಲ್ಲಿ ಪ್ರತಿಬಿಂಬಿತವಾಗಬೇಕು.
ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರಿಗಿದೆ. ಅದರ ಆಚರಣೆಯು ಕೇವಲ ಆ ದಿನಕ್ಕೆ ಸೀಮಿತವಾಗಿರದೆ ಪ್ರತಿದಿನ ನಡೆಯಲಿ, ಪ್ರತಿಯೊಬ್ಬರ ಮನದಲ್ಲಿ ಹಸಿರು ಬಿತ್ತನೆ ಆದಾಗ ಮಾತ್ರ ನಮ್ಮ ಹಸಿರುಮಯ ಪರಿಸರ ಉಳಿಯಲು ಸಾಧ್ಯ.
ಕೆ. ಎಂ. ಪವಿತ್ರಾ
ಮುರ್ಡೇಶ್ವರ