ಉಡುಪಿ, ಮೇ. 23 (DaijiworldNews/AA): ಜಿಲ್ಲೆಯಲ್ಲಿ ನಿರಂತರವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಳಲಗಿರಿ ನಿವಾಸಿ ಕೃಷ್ಣ ಆಚಾರಿ (43) ಮತ್ತು ಕೆಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಟಾರ್ (27) ಎಂದು ಗುರುತಿಸಲಾಗಿದೆ.
ಇಬ್ಬರ ವಿರುದ್ಧ ಮಾದಕ ದ್ರವ್ಯ ಮತ್ತು ಮನೋದ್ರವ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಜಿಲ್ಲಾ ಪೊಲೀಸರು ಆರೋಪಿಗಳ ಚಟುವಟಿಕೆಗಳನ್ನು ಕೆಲ ಸಮಯದಿಂದ ಮೇಲ್ವಿಚಾರಣೆ ಮಾಡುತ್ತಿದ್ದು, ಆ ಬಳಿಕ ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬಂಧಿತರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾದಕ ವಸ್ತುಗಳನ್ನು ವಿತರಿಸುತ್ತಿದ್ದರು ಎನ್ನಲಾಗಿದೆ.