ಕಾರ್ಕಳ, ಮೇ.20 (DaijiworldNews/TA): ಅಸಮರ್ಪಕ ತಡೆಗೋಡೆ ಕಾಮಗಾರಿ ನಿರ್ಮಾಣದ ಪರಿಣಾಮವಾಗಿ ಮಳೆಗಾಲ ಮುಂಗಾರು ಪೂರ್ವದ ಮಳೆ ಶುರು ಆಗುತ್ತಿದ್ದಂತೆ ಗುಡ್ಡ ಜರಿಯುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ- 169 ಸಾಣೂರು ಪದ್ಮನಾಭ ನಗರದ ಗುಡ್ಡದ ತುದಿಯಲ್ಲಿರುವ ಹೈಟೆನ್ಶನ್ ಟವರ್ ಬುಡದಲ್ಲಿ ಕಳೆದ ಎರಡು ವರ್ಷಗಳ ಗ್ರಾಮಸ್ಥರ ಹೋರಾಟದ ನಂತರ ಹೆದ್ದಾರಿ ಇಲಾಖೆ ಗುಡ್ಡದ ಎತ್ತರದ ಅರ್ಧ ಭಾಗದವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ.



ಗುಡ್ಡದ ಮಣ್ಣು ಕಲ್ಲುಗಳು ರಸ್ತೆಗೆ!: ಇದೀಗ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುಡ್ಡದ ಮೇಲಿನ ದೊಡ್ಡ ದೊಡ್ಡ ಕಲ್ಲುಗಳು ಹಾಗೂ ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿದ್ದು, ವಾಹನ ಗಳಿಗೆ ಮತ್ತು ಸರ್ವಿಸ್ ರಸ್ತೆಯಲ್ಲಿ ನಡೆದಾಡುವ ಗ್ರಾಮಸ್ಥರಿಗೆ ಆತಂಕಕಾರಿಯಾಗಿ ಪರಿಣಮಿಸಿದೆ. ಮುಂಗಾರು ಪೂರ್ವದಲ್ಲಿ ಸುರಿಯುತ್ತಿರುವ ಒಂದೆರಡು ಮಳೆಗೆ ಈ ಪರಿಸ್ಥಿತಿಯಾದರೆ, ಮುಂದೆ ಜೂನ್ ನಿಂದ ಪ್ರಾರಂಭವಾಗುವ ಮುಂಗಾರು ಮಳೆ ನಿರಂತರವಾಗಿ ಸುರಿಯುವಾಗ ಖಂಡಿತವಾಗಿಯೂ ಗುಡ್ಡದ ಮಣ್ಣು ಜರಿದು ರಸ್ತೆಗೆ ಬಿದ್ದು ಇನ್ನಷ್ಟು ಅಪಾಯವಾಗುವ ಸಂಭವವಿದೆ ಎಂಬ ಆತಂಕ ನಾಗರಿಕರದಾಗಿದೆ.ಉಡುಪಿ ಜಿಲ್ಲಾಡಳಿತವು ಈ ಬೆಳವಣಿಗೆಯನ್ನು ಗಂಭೀರ ಎಂದು ಪರಿಗಣಿಸಲೇ ಬೇಕು. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಿ ನಿರ್ಮಾಣಗೊಂಡ ಅರ್ಧ ಭಾಗ ತಡೆಗೋಡೆಯನ್ನು ಗುಡ್ಡದ ಎತ್ತರಕ್ಕೆ ಏರಿಸಬೇಕೆಂಬ ಒತ್ತಾಯ ಸ್ಥಳೀಯರದಾಗಿದೆ.
ಜನಾಕ್ರೋಶವನ್ನು ಎದುರಿಸಲು ಸಿದ್ಧರಾಗಿ : ಕೇವಲ ಜನರ ಒತ್ತಡಕ್ಕೆ ಮಣಿದು ಅರೆಬರೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪರಿಸರದ ಜನತೆ ಹಿಡಿ ಶಾಪ ಹಾಕುತ್ತಿದ್ದು, ಕೂಡಲೇ ಗುಡ್ಡದ ಮಣ್ಣು ರಸ್ತೆಗೆ ಬೀಳದಂತೆ ಸುರಕ್ಷಿತವಾಗಿ ತಡೆಗೋಡೆ ಕಾಮಗಾರಿಯನ್ನು ಸಂಪೂರ್ಣಗೊಳಿಸದಿದ್ದರೆ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಾಣೂರು ಗ್ರಾಮಸ್ಥರ ಭಾರಿ ಜನಾಕ್ರೋಶಕ್ಕೆ ತುತ್ತಾಗಬೇಕಾಗಿದೀತೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.