ಬೆಳ್ತಂಗಡಿ, ಏ.20(DaijiworldNews/TA): ಕರಾವಳಿಯ ಶೈಕ್ಷಣಿಕ ರಂಗ, ಧಾರ್ಮಿಕ ಕ್ಷೇತ್ರ, ಬ್ಯಾಂಕ್ ಗಳಲ್ಲಿ ಎಲ್ಲರೂ ಇದ್ದಾರೆ. ಬರೀ ಹಿಂದೂ ಮಾತ್ರ ಇರುವುದಲ್ಲ. ಆದರೆ ಬಿಜೆಪಿಯವರು ಮಾತ್ರ, ಹಿಂದು ನಾವು ಮುಂದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನರು, ಬಿಲ್ಲವರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲ ಜನಾಂಗವನ್ನು ಒಂದೇ ಎಂದು ಕಾಂಗ್ರೆಸ್ ಹೇಳುತ್ತಿದೆ.

ಬಿಜೆಪಿ ಹೇಳುತ್ತಿರುವ ವಿಚಾರದ ಬಗ್ಗೆ ನಾನ್ಯಾಕೆ ಟೀಕೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಾಲಯಕ್ಕೆ ರವಿವಾರ ಭೇಟಿ ಮಾಡಿದ ಬಳಿಕ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
ಕರಾವಳಿ ಎಲ್ಲ ಧರ್ಮಕ್ಕೂ ಭದ್ರಕೋಟೆಯಾಗಿದೆ. ಇಲ್ಲಿರುವ ದೇವಸ್ಥಾನ, ದರ್ಗಾ, ನೀರು, ಪರಿಸರ, ವಾತಾವರಣ ಸಮುದ್ರ ಎಲ್ಲವೂ ನೀತಿ ಮೇಲೆ ಇದೆ. ಜಾತಿ ಮೇಲೆ ಇಲ್ಲ. ಕರಾವಳಿ ನಮ್ಮ ರಾಜ್ಯದ ಮುಖ್ಯವಾದ ಅಂಗ. ಮನುಷ್ಯನಿಗೆ ದೇಹದ ಅಂಗಗಳು ಎಷ್ಟು ಮುಖ್ಯವೋ, ಕರಾವಳಿ ಭಾಗವೂ ಅಷ್ಟೇ ಮುಖ್ಯ. ಕರಾವಳಿಯಲ್ಲಿ ಭಾವನೆಯ ಮೇಲೆ ರಾಜಕಾರಣ ನಡೆಯುತ್ತಿರುವ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಭಾವನೆಗಿಂತ ಬದುಕು ಮುಖ್ಯ. ಬದುಕಿನಲ್ಲಿ ರಾಜಕಾರಣ ಮಾಡಬೇಕು ಭಾವನೆಯಲ್ಲಿ ರಾಜಕಾರಣ ಮಾಡಬಾರದು. ಬದುಕು ಇದ್ದರೆ ರಾಜಕಾರಣ ಎಂದರು.