ಬಂಟ್ವಾಳ, ಏ.16 (DaijiworldNews/AA): ಮೊಬೈಲ್ ಅಂಗಡಿಗೆ ಬೀಗ ಹಾಕಿ ಮುಚ್ಚುತ್ತಿರುವ ವೇಳೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನಿಗೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ನೆಹರುನಗರ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ.

ನೆಹರುನಗರ ನಿವಾಸಿ ತಸ್ಲೀಮ್ ಎಂಬುವವರ ಮೇಲೆ ತಲವಾರುನಿಂದ ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಸ್ಲೀಮ್ ಅವರು ಪಾಣೆಮಂಗಳೂರು ನೆಹರು ನಗರದಲ್ಲಿರುವ ಹೈವೆ ಹೋಟೆಲ್ ಪಕ್ಕದಲ್ಲಿ ಮೊಬೈಲ್ ಶಾಪ್ ಹೊಂದಿದ್ದು, ಅಂಗಡಿ ಬಂದ್ ಮಾಡುವ ಸಂದರ್ಭದಲ್ಲಿ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಲಾಗಿದೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ತಸ್ಲೀಮ್ ಅವರ ಸ್ನೇಹಿತ ಮತ್ತು ಇದೇ ಪರಿಸರದ ಹ್ಯಾರೀಶ್ ಎಂಬಾತ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದೀಗ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ, ಎಸ್.ಐ.ರಾಮಕೃಷ್ಣ ಭೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.