ಮಂಗಳೂರು, ಏ.13 (DaijiworldNews/AA): ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) 2024-25ನೇ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಸರ್ಕಾರ ನಿಗದಿಪಡಿಸಿದ 114 ಕೋಟಿ ರೂ. ಗುರಿಯನ್ನು ಮೀರಿ 138.2 ಕೋಟಿ ರೂ. ಸಂಗ್ರಹಿಸಿದೆ. ನಿಗದಿತ ಗುರಿಗಿಂತ 23.2 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಅದರಲ್ಲೂ ಕೊನೆಯ 45 ದಿನಗಳಲ್ಲಿಯೇ ಬರೋಬ್ಬರಿ 37.2 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಸಿಸಿ ವ್ಯಾಪ್ತಿಯಲ್ಲಿ 2.16 ಲಕ್ಷ ಆಸ್ತಿದಾರರಿದ್ದಾರೆ. 2023-24ರಲ್ಲಿ ಪಾಲಿಕೆಯು 117 ಕೋಟಿ ರೂ. ಸಂಗ್ರಹಿಸಿತ್ತು. ಈ ವರ್ಷ ನಿರಂತರ ಪ್ರಯತ್ನಗಳು ಮತ್ತು ವಿವಿಧ ಅಭಿಯಾನಗಳ ಸಹಾಯದಿಂದ ಅಧಿಕಾರಿಗಳು ಗುರಿಯನ್ನು ತಲುಪುವುದಲ್ಲದೆ, ಹೆಚ್ಚುವರಿಯಾಗಿ 23.2 ಕೋಟಿ ರೂ. ಸಂಗ್ರಹಿಸಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಸಂಗ್ರಹ ನಡೆದರೂ ತಾಂತ್ರಿಕ ಮತ್ತಿತರ ಕಾರಣಗಳಿಗಾಗಿ ಸಾಕಷ್ಟು ತೆರಿಗೆ ಸಂಗ್ರಹ ಬಾಕಿದೆ. ಇ-ಖಾತಾಗೆ ವರ್ಗಾವಣೆಯಾಗದೇ ಇರುವ ಅನೇಕರ ಆಸ್ತಿ ತೆರಿಗೆ ಪಾವತಿ ಬಾಕಿ ಇದೆ. ಸದ್ಯ ಸಂಗ್ರಹಿಸಿದ ಮಾಹಿತಿಯಂತೆ ಸುಮಾರು 28-30 ಸಾವಿರ ಆಸ್ತಿ ಮಾಲೀಕರು ತೆರಿಗೆ ಪಾವತಿಸಲು ಬಾಕಿ ಉಳಿದಿದ್ದಾರೆ.
ನಗರ ಪಾಲಿಕೆಯು ಇತ್ತೀಚಿನ ವರ್ಷಗಳಲ್ಲಿ ಸಮಗ್ರ ಆಸ್ತಿ ಸಮೀಕ್ಷೆಯನ್ನು ನಡೆಸಿಲ್ಲ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಆಸ್ತಿ ತೆರಿಗೆಯಲ್ಲಿ ಪ್ರತಿವರ್ಷ ಶೇ.೩ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಸಂಸ್ಥೆಗಳು ಸರಿಯಾದ ತೆರಿಗೆ ಪಾವತಿಸುತ್ತಿಲ್ಲ ಮತ್ತು ಅವರಿಗೆ ನೋಟಿಸ್ ನೀಡಲಾಗಿದೆ. ಪಾವತಿ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆಯುಕ್ತರ ನೇತೃತ್ವದಲ್ಲಿ ಕಂದಾಯ ವಿಭಾಗದ ಸತತ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಎಪ್ರಿಲ್ ತಿಂಗಳಲ್ಲಿ ಪಾವತಿಸುವ ಮೂಲಕ ವಿನಾಯಿತಿ ಗಳಿಸ ಬಹುದು. http://www.mccproperty.in/ ಮಾಹಿತಿ ಪಡೆದು ಮುಂಗಡವಾಗಿ ತೆರಿಗೆ ಪಾವತಿಸಬೇಕು. ಶೇ.10-15ರಷ್ಟು ಮಂದಿ ಆನ್ಲೈನ್ ವ್ಯವಸ್ಥೆಯಿಂದ ದೂರ ಉಳಿದಿದ್ದು, ಪಾಲಿಕೆ ಕಚೇರಿಗೆ ತೆರಳಿ ಮಾಹಿತಿ ಪಡೆದು ತೆರಿಗೆ ಪಾವತಿಸಬೇಕು ಎಂದು ಮನಪಾ ಕಂದಾಯ ವಿಭಾಗ ಉಪ ಆಯುಕ್ತರಾದ ಅಕ್ಷತಾ ಕೆ. ತಿಳಿಸಿದ್ದಾರೆ.
ಯಶಸ್ಸಿನ ಹಿಂದಿನ ಮೂರು ಅಭಿಯಾನಗಳು:
ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾಗೃತಿ ಅಭಿಯಾನ:
ಫೆಬ್ರವರಿವರೆಗೆ ಎಂಸಿಸಿ 101 ಕೋಟಿ ರೂ. ಸಂಗ್ರಹಿಸಿತ್ತು. ಉಳಿದ 14 ಕೋಟಿ ರೂ.ಗಳನ್ನು ಕ್ರೋಢೀಕರಿಸಲು, ಎಲ್ಲಾ 60 ವಾರ್ಡ್ಗಳಲ್ಲಿ ಮೊಬೈಲ್ ವ್ಯಾನ್ಗಳನ್ನು ಬಳಸಿ ವಿಶೇಷ ಜಾಗೃತಿ ಮೂಡಿಸಲಾಗಿತ್ತು. ಇದು ಸಕಾರಾತ್ಮಕ ಫಲಿತಾಂಶ ನೀಡಿತು.
ದೂರವಾಣಿ ಕರೆ ಮೂಲಕವೂ ಜಾಗೃತಿ ಅಭಿಯಾನ:
ಸಂಗ್ರಹಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಲು ಎಂಸಿಸಿ ಸ್ಮಾರ್ಟ್ ಸಿಟಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಬಾಕಿ ಉಳಿಸಿಕೊಂಡವರ ಪಟ್ಟಿಗಳನ್ನು ತಯಾರಿಸಲಾಯಿತು ಮತ್ತು ತೆರಿಗೆದಾರರಿಗೆ ನೇರ ಕರೆಗಳು ಮತ್ತು ಬೃಹತ್ ಸಂದೇಶಗಳನ್ನು ಕಳುಹಿಸಲಾಯಿತು. ಕರಪತ್ರಗಳನ್ನು ಸಹ ವಿತರಿಸಲಾಯಿತು ಮತ್ತು ಕಂದಾಯ ಅಧಿಕಾರಿಗಳು ವಾರ್ಡ್ ಮಟ್ಟದಲ್ಲಿ ಫಾಲೋ-ಅಪ್ ಮಾಡಿದರು.
ಶೇಕಡಾ ಐದರಷ್ಟು ರಿಯಾಯಿತಿ ಪ್ರೋತ್ಸಾಹ:
ಸಮಯಕ್ಕೆ ಪಾವತಿಗಳನ್ನು ಪ್ರೋತ್ಸಾಹಿಸಲು, ಎಂಸಿಸಿ ದಂಡವನ್ನು ಮನ್ನಾ ಮಾಡಿತು ಮತ್ತು ಮುಂಗಡ ತೆರಿಗೆ ಪಾವತಿದಾರರಿಗೆ ಶೇಕಡಾ ಐದರಷ್ಟು ರಿಯಾಯಿತಿಯನ್ನು ನೀಡಿತು.