ಕಾಸರಗೋಡು, ಏ.12 (DaijiworldNews/AA): ಮಂಜೇಶ್ವರದಲ್ಲಿ ಮೂಲ್ಕಿ ನಿವಾಸಿಯಾದ ಆಟೋ ಚಾಲಕ ಮುಹಮ್ಮದ್ ಶರೀಫ್ ರವರ ನಿಗೂಡ ಸಾವು ಕೊಲೆ ಎಂದು ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.

ಶರೀಫ್ ರವರ ಕೈ, ತಲೆ ಹಾಗೂ ಕುತ್ತಿಗೆಯಲ್ಲಿ ಮಾರಕಾಸ್ತ್ರಗಳಿಂದ ಕಡಿದ ಗಾಯಗಳಾಗಿವೆ ಎಂದು ಪರೀಕ್ಷೆಯಿಂದ ದೃಡ ಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುರುವಾರ ರಾತ್ರಿ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಶರೀಫ್ ರವರ ಮೃತದೇಹ ಪತ್ತೆಯಾಗಿತ್ತು.
ಕುತ್ತಿಗೆಯ ಬಲವಾದ ಗಾಯ ಸಾವಿಗೆ ಪ್ರಮುಖ ಕಾರಣ. ಗಂಟೆಗಳ ಕಾಲ ನೀರಿನಲ್ಲಿದ್ದರೂ ಶ್ವಾಸ ಕೋಶ ದೊಳಗೆ ನೀರು ನುಗ್ಗಿಲ್ಲ. ಇದರಿಂದ ಕೊಲೆ ಗೈದ ಬಳಿಕ ಬಾವಿಗೆ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮಂಜೇಶ್ವರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತದೆ ಗುರುವಾರ ರಾತ್ರಿ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಸಂಶಯಾಸ್ಪದವಾಗಿ ಕಂಡು ಬಂದರೂ ರಿಕ್ಷಾವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ನಡೆಸಿದ ಶೋಧದಿಂದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಶುಕ್ರವಾರ ಬೆಳಿಗ್ಗೆ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಲಾಯಿತು. ಬುಧವಾರ ರಾತ್ರಿ ಹತ್ತು ಗಂಟೆಗೆ ಆಟೋ ರಿಕ್ಷಾವನ್ನು ಬಾಡಿಗೆಗೆಂದು ಮೂವರು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಅಂದು ರಾತ್ರಿಯಿಂದ ಮುಹಮ್ಮದ್ ಶರೀಫ್ ನಾಪತ್ತೆಯಾಗಿದ್ದರು. ಈ ಮೂವರನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.