ಬರ್ಲಿನ್, ಏ. 21 (DaijiworldNews/TA): ಜರ್ಮನಿಯ ಡ್ಯೂಸ್ಬರ್ಗ್ ಸಮೀಪದ ಮೋರ್ಸ್ ನಗರದಲ್ಲಿರುವ ಗುರುದ್ವಾರದಲ್ಲಿ ಸೋಮವಾರ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ.

ಸಾಮಾನ್ಯವಾಗಿ ಭಕ್ತರ ಪ್ರಾರ್ಥನೆಯಿಂದ ಶಾಂತವಾಗಿರುವ ಗುರುದ್ವಾರದಲ್ಲಿ ಈ ಬಾರಿ ಶಾಂತಿಯ ಬದಲು ಗಲಾಟೆಯ ವಾತಾವರಣ ನಿರ್ಮಾಣವಾಯಿತು. ಧಾರ್ಮಿಕ ಸಭೆ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಎರಡು ಗುಂಪುಗಳ ನಡುವೆ ನಡೆದ ಸಂಘರ್ಷ ಪವಿತ್ರ ಆವರಣವನ್ನೇ ರಕ್ತಸಿಕ್ತಗೊಳಿಸಿತು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 40 ಮಂದಿ ಈ ಘರ್ಷಣೆಯಲ್ಲಿ ಭಾಗಿಯಾಗಿದ್ದು, ಇದು ಆಕಸ್ಮಿಕ ಜಗಳವಲ್ಲದೆ ಪೂರ್ವಯೋಜಿತ ದಾಳಿಯಾಗಿದೆ. ದಾಳಿಕೋರರು ಪೆಪ್ಪರ್ ಸ್ಪ್ರೇ ಬಳಸಿ ಎದುರಾಳಿಗಳನ್ನು ಅಸಹಾಯಕರನ್ನಾಗಿಸಿದ ನಂತರ ಗುಂಡಿನ ಸದ್ದು ಕೇಳಿಬಂದಿದ್ದು, ಚಾಕುಗಳಿಂದಲೂ ದಾಳಿ ನಡೆಸಲಾಗಿದೆ. ದಾಳಿ ನಡೆಯುತ್ತಿದ್ದಂತೆಯೇ ಭಯಭೀತರಾದ ಜನರು ಸ್ಥಳದಿಂದ ಓಡಿಹೋದರು.
ಈ ಘರ್ಷಣೆಗೆ ಕಾರಣವಾಗಿ ಗುರುದ್ವಾರದ ಹೊಸ ನಿರ್ದೇಶಕ ಮಂಡಳಿಯ ಚುನಾವಣೆಯ ವಿಚಾರ ಹೇಳಲಾಗುತ್ತಿದೆ. ಹಿಂದಿನ ಮತ್ತು ಪ್ರಸ್ತುತ ಸದಸ್ಯರ ನಡುವೆ ನಿಧಿ ಮತ್ತು ಆಡಳಿತದ ಮೇಲಿನ ಹಿಡಿತಕ್ಕಾಗಿ ದೀರ್ಘಕಾಲದಿಂದ ಉದ್ವಿಗ್ನತೆ ಮುಂದುವರಿದಿತ್ತು ಎಂದು ತಿಳಿದುಬಂದಿದೆ.