ಇಸ್ಲಾಮಾಬಾದ್, ಮಾ. 19 (DaijiworldNews/T A): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಉಂಟಾದ ಗಲ್ಫ್ ತೈಲ ಬಿಕ್ಕಟ್ಟು ಪಾಕಿಸ್ತಾನಕ್ಕೆ ಭಾರೀ ಹೊಡೆತ ನೀಡಿದೆ. ತೈಲ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 23ರಂದು ನಡೆಯಬೇಕಿದ್ದ ಪಾಕಿಸ್ತಾನ ದಿನದ ಭವ್ಯ ಗಣರಾಜ್ಯೋತ್ಸವ ಪರೇಡ್ ಅನ್ನು ಸರ್ಕಾರ ರದ್ದುಗೊಳಿಸಿದೆ. ಈ ಬಗ್ಗೆ ಪ್ರಧಾನಿ ಶೆಹಬಾಜ್ ಷರೀಫ್ ಅವರ ಕಚೇರಿ ಅಧಿಕೃತ ಪ್ರಕಟಣೆ ನೀಡಿದೆ.

ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದ ತೈಲ ಸರಬರಾಜು ಗಂಭೀರವಾಗಿ ವ್ಯತ್ಯಯಗೊಂಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಉದ್ಭವಿಸಿದ ಅಸ್ಥಿರತೆ ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸಾರ್ವಜನಿಕ ವೆಚ್ಚ ಕಡಿತ ಮತ್ತು ಇಂಧನ ಸಂರಕ್ಷಣೆಗಾಗಿ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಸರ್ಕಾರದ ಪ್ರಕಟಣೆ ಪ್ರಕಾರ, ಈ ಬಾರಿ ಪಾಕಿಸ್ತಾನ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತದೆ. ಭವ್ಯ ಪರೇಡ್ಗಳ ಬದಲಾಗಿ ಕೇವಲ ಧ್ವಜಾರೋಹಣ ಸಮಾರಂಭವನ್ನು ಮಾತ್ರ ನಡೆಸಲಾಗುತ್ತದೆ. ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಸರಳ ಹಾಗೂ ಘನತೆಯಿಂದ ಕಾರ್ಯಕ್ರಮವನ್ನು ಆಚರಿಸಲು ಸೂಚಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳು ಏರಿಕೆಯಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಇಂಧನ ದರಗಳೂ ಹೆಚ್ಚಳ ಕಂಡಿವೆ. ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಎಣ್ಣೆ ಬೆಲೆಗಳನ್ನು ಸರ್ಕಾರ ಹೆಚ್ಚಿಸಿದ್ದು, ಇದರಿಂದ ಸಾಮಾನ್ಯ ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚುವರಿ ಆರ್ಥಿಕ ಭಾರ ಉಂಟಾಗಿದೆ. ರಂಜಾನ್ ಅವಧಿಯಲ್ಲಿ ಈ ಬೆಲೆ ಏರಿಕೆ ಜನಜೀವನವನ್ನು ಮತ್ತಷ್ಟು ಕಷ್ಟಕರವಾಗಿಸಿದೆ.
ಪಾಕಿಸ್ತಾನವು ತನ್ನ ತೈಲ ಅಗತ್ಯಗಳಿಗಾಗಿ ಗಲ್ಫ್ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಹೆಚ್ಚಿನ ಆಮದು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಯುದ್ಧ ಆರಂಭವಾಗಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಕಳೆದಿರುವ ಈ ಸಂದರ್ಭದಲ್ಲಿ, ಇರಾನ್ ಆ ಪ್ರದೇಶದಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದ ಪರಿಣಾಮ ಜಾಗತಿಕ ಸರಬರಾಜು ಸರಪಳಿಗೆ ದೊಡ್ಡ ಹೊಡೆತ ಬಿದ್ದಿದೆ.
ಮಾರ್ಚ್ 23 ಪಾಕಿಸ್ತಾನದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. 1940ರಲ್ಲಿ ಈ ದಿನ ಲಾಹೋರ್ ನಿರ್ಣಯ ಮಂಡನೆಯಾಗಿ, ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಗೆ ಬುನಾದಿ ಹಾಕಿತು. ಬಳಿಕ 1956ರಲ್ಲಿ ಪಾಕಿಸ್ತಾನ ತನ್ನ ಮೊದಲ ಸಂವಿಧಾನವನ್ನು ಅಂಗೀಕರಿಸಿ ಗಣರಾಜ್ಯ ರಾಷ್ಟ್ರವಾಗಿ ಘೋಷಿಸಿತು.
ಪ್ರಸ್ತುತ ತೈಲ ಬಿಕ್ಕಟ್ಟು ದೇಶದ ಹಣದುಬ್ಬರವನ್ನು ಹೆಚ್ಚಿಸುವ ಜೊತೆಗೆ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿಗಳಿಂದ ಬರುವ ಹಣದ ಹರಿವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.