ದುಬೈ, ಮಾ. 08 (DaijiworldNews/TA): ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಯುಎಇ ಹಾಗೂ ಇತರ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಅಥವಾ ಪ್ರಯಾಣಿಸುವ ಭಾರತೀಯರಿಗೆ ಭಾರತ ಸರ್ಕಾರ ಮಹತ್ವದ ಸಲಹೆಗಳನ್ನು ನೀಡಿದೆ. ಸಂಘರ್ಷವು ಒಂಬತ್ತನೇ ದಿನಕ್ಕೆ ಕಾಲಿಟ್ಟಿರುವುದರಿಂದ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಮಾರ್ಚ್ 1ರಿಂದ ಮಾರ್ಚ್ 7ರವರೆಗೆ ಗಲ್ಫ್ ಪ್ರದೇಶದಿಂದ 50,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇವರಲ್ಲಿ 32,107 ಮಂದಿ ಭಾರತೀಯ ವಿಮಾನಯಾನ ಸಂಸ್ಥೆಗಳ ಮೂಲಕ ಪ್ರಯಾಣಿಸಿದ್ದಾರೆ. ಇನ್ನಷ್ಟು ಪ್ರಯಾಣಿಕರು ವಾಪಸ್ಸಾಗಲು ಮುಂದಿನ ದಿನಗಳಲ್ಲಿ ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.
ವಿಶೇಷ ನಿಯಂತ್ರಣ ಕೊಠಡಿ ಸ್ಥಾಪನೆ : ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಕೇಂದ್ರ ಸರ್ಕಾರ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಇದರಿಂದ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಅವರ ಕುಟುಂಬ ಸದಸ್ಯರು ಸಂಪರ್ಕಿಸಿ ಮಾಹಿತಿ ಮತ್ತು ನೆರವು ಪಡೆಯಬಹುದು.
ಹೆಲ್ಪ್ಲೈನ್ ಮತ್ತು ಹೆಚ್ಚಿನ ಮಾಹಿತಿಗಾಗಿ:
[https://www.mea.gov.in/pressreleases.htm?dtl/40846/Special_Control_Room_in_MEA](https://www.mea.gov.in/pressreleases.htm?dtl/40846/Special_Control_Room_in_MEA)
ಭಾರತೀಯರು ತಮ್ಮ ಹತ್ತಿರದ ಭಾರತೀಯ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ನೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಯುಎಇಯಲ್ಲಿರುವ ಭಾರತೀಯರಿಗೆ ಎಚ್ಚರಿಕೆ : ಇದರ ನಡುವೆ ಭಾರತದ ರಾಯಭಾರ ಕಚೇರಿ, ಅಬುಧಾಬಿ ಯುಎಇಯಲ್ಲಿ ವಾಸಿಸುವ ಭಾರತೀಯರಿಗೆ ಪ್ರಮುಖ ಸೂಚನೆ ನೀಡಿದೆ. ಸ್ಥಳೀಯ ಆಡಳಿತ ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಘಟನಾ ಸ್ಥಳಗಳು, ನಿರ್ಬಂಧಿತ ಪ್ರದೇಶಗಳು ಅಥವಾ ವಿಮಾನ ನಿಲ್ದಾಣಗಳ ಒಳಗೆ ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡಬಾರದು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್ಚರಿಕೆ ಅಲರ್ಟ್ ನೀಡಿದಾಗ ಭಾರತೀಯರು ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ಅಧಿಕಾರಿಗಳು ಪರಿಸ್ಥಿತಿ ಸುರಕ್ಷಿತವೆಂದು ಘೋಷಿಸುವವರೆಗೆ ಅಲ್ಲಿಯೇ ಇರಬೇಕು ಎಂದು ಸಲಹೆ ನೀಡಲಾಗಿದೆ. ಕ್ಷಿಪಣಿ ಅವಶೇಷಗಳು ಅಥವಾ ಸಂಶಯಾಸ್ಪದ ವಸ್ತುಗಳು ಕಂಡುಬಂದರೆ ಅವುಗಳನ್ನು ಮುಟ್ಟದೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಘಟನೆ ಸ್ಥಳಗಳ ಫೋಟೋ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನೂ ತಪ್ಪಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ವಿಮಾನ ಸೇವೆಗಳು ಹಂತ ಹಂತವಾಗಿ ಪುನರಾರಂಭ : ಪ್ರದೇಶದಲ್ಲಿ ವಾಯುಪ್ರದೇಶವನ್ನು ಭಾಗಶಃ ತೆರೆಯಲಾಗಿರುವ ಹಿನ್ನೆಲೆಯಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಮಿತ ಸಂಖ್ಯೆಯಲ್ಲಿ ಸೇವೆಗಳನ್ನು ಪುನರಾರಂಭಿಸಿವೆ.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆಗಳು ಜೆಡ್ಡಾ ಮತ್ತು ಮಸ್ಕತ್ ನಗರಗಳಿಗೆ ನಿಯಮಿತ ವಿಮಾನಗಳನ್ನು ನಡೆಸುತ್ತಿವೆ. ಜೊತೆಗೆ ದುಬೈ, ಅಬುಧಾಬಿ, ಶಾರ್ಜಾ, ರಾಸ್ ಅಲ್ ಖೈಮಾ ಹಾಗೂ ಮಸ್ಕತ್ ನಗರಗಳಿಂದ ಭಾರತಕ್ಕೆ ಹೆಚ್ಚುವರಿ ವಿಶೇಷ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿವೆ. ದೂರದ ಪ್ರಯಾಣದ ಕಾರಣ ಕೆಲವು ವಿಮಾನಗಳು ರೋಮ್ ಅಥವಾ ವಿಯೆನ್ನಾದಲ್ಲಿ ತಾಂತ್ರಿಕ ನಿಲುಗಡೆಗಳನ್ನು ಮಾಡುತ್ತಿವೆ.
ಆದರೆ ಬಹ್ರೇನ್, ದಮ್ಮಾಮ್, ದೋಹಾ, ಕುವೈತ್ ಮತ್ತು ರಿಯಾದ್ ಮಾರ್ಗಗಳಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಮಾರ್ಚ್ 13ರವರೆಗೆ ರದ್ದುಗೊಂಡಿವೆ. ಇದೇ ವೇಳೆ ಏರ್ ಇಂಡಿಯಾ ಸಂಸ್ಥೆಯ ದಮ್ಮಾಮ್, ದೋಹಾ ಮತ್ತು ರಿಯಾದ್ ಸೇವೆಗಳು ಮಾರ್ಚ್ 10ರವರೆಗೆ ಸ್ಥಗಿತಗೊಂಡಿವೆ.
ಪ್ರಯಾಣಿಕರಿಗೆ ಸಂಪರ್ಕ ವಿವರ : ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಟಿಕೆಟ್ಗಳನ್ನು ಮರುಬುಕ್ ಮಾಡಬಹುದು ಅಥವಾ ಪೂರ್ಣ ಮರುಪಾವತಿ ಪಡೆಯಬಹುದು.
ಏರ್ ಇಂಡಿಯಾ ಪ್ರಯಾಣಿಕರಿಗೆ:
ವೆಬ್ಸೈಟ್ : [https://www.airindia.com](https://www.airindia.com)
ಫೋನ್: +91 11 6932 9333 / +91 11 6932 9999
ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ:
WhatsApp (AI ಸಹಾಯಕ ಟಿಯಾ) : +91 63600 12345
ಇದರ ನಡುವೆ ಇಂಡಿಗೋ ಕೆಲವು ಯುರೋಪಿಯನ್ ನಗರಗಳಿಗೆ ವಿಮಾನ ಸೇವೆಗಳನ್ನು ಪುನರಾರಂಭಿಸಿದ್ದು, ಮಧ್ಯಪ್ರಾಚ್ಯದ ಎಂಟು ನಗರಗಳಿಗೆ ನಿಯಮಿತ ಸೇವೆಗಳು ಮುಂದುವರಿದಿವೆ.
ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಅವಲಂಬಿಸಿ ವಿಮಾನ ವೇಳಾಪಟ್ಟಿಯಲ್ಲಿ ಬದಲಾವಣೆ ಸಂಭವಿಸಬಹುದು. ಆದ್ದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.