ದುಬೈ, ಮಾ. 08 (DaijiworldNews/AA): ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ 'ಆಪರೇಷನ್ ಎಪಿಕ್ ಫ್ಯೂರಿ' ದಾಳಿಯ ಬಳಿಕ ಸಂಭವಿಸಿದ ಕ್ಷಿಪಣಿ ಸಂಘರ್ಷದಲ್ಲಿ ಅರಬ್ ರಾಷ್ಟ್ರಗಳಿಗೆ ಆದ ಹಾನಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದ್ದರು.

ಇರಾನ್ ಸರ್ಕಾರಿ ವಾಹಿನಿಯಲ್ಲಿ ಅಧಿಕೃತವಾಗಿ ಕ್ರಮೆಯಾಚಿಸಿದ ಅವರು, "ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು ನನ್ನ ಪರವಾಗಿ ಮತ್ತು ಇರಾನ್ ಪರವಾಗಿ ಕ್ಷಮೆಯಾಚಿಸಬೇಕು. ನೆರೆಹೊರೆಯ ರಾಷ್ಟ್ರಗಳ ಮೇಲೆ ಇನ್ನು ಮುಂದೆ ಯಾವುದೇ ಕ್ಷಿಪಣಿ ದಾಳಿ ನಡೆಸುವುದಿಲ್ಲ ಎಂದು ಇರಾನ್ನ ಮಧ್ಯಂತರ ನಾಯಕತ್ವ ಮಂಡಳಿ ನಿರ್ಧರಿಸಿದೆ. ಇರಾನ್ ವಿರುದ್ಧದ ಮಿಲಿಟರಿ ದಾಳಿಗಳಿಗೆ ತಮ್ಮ ಭೂಮಿ ಅಥವಾ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡಬಾರದು" ಎಂದು ಅವರು ನೆರೆಯ ರಾಷ್ಟ್ರಗಳಿಗೆ ಮನವಿ ಮಾಡಿದ್ದರು.
ಇರಾನ್ ಅಧ್ಯಕ್ಷ ಮಸೂದ್ ಕ್ಷಮೆಯಾಚನೆ ಹೊರತಾಗಿಯೂ, ಗಲ್ಫ್ ವಲಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಶನಿವಾರ ತಡರಾತ್ರಿ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕತಾರ್ ಮತ್ತು ಬಹ್ರೇನ್ನ ವಾಯು ರಕ್ಷಣಾ ವ್ಯವಸ್ಥೆಗಳು ಇರಾನ್ನ ಕ್ಷಿಪಣಿ ಮತ್ತು ಡ್ರೋನ್ಗಳನ್ನು ಹೊಡೆದುರುಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದುಬೈನಲ್ಲಿ, ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದ ಪರಿಣಾಮವಾಗಿ ಬಿದ್ದ ಅವಶೇಷಗಳಿಂದ ದುಬೈ ಮರಿನಾ ಪ್ರದೇಶದ ಕಟ್ಟಡವೊಂದರ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇರಾನ್ ಅಧ್ಯಕ್ಷರ ಭರವಸೆಯ ಹೊರತಾಗಿಯೂ, ಅಲ್ಲಿನ ಮಿಲಿಟರಿ ಘಟಕಗಳು ಕಾರ್ಯಾಚರಣೆಯನ್ನು ಮುಂದುವರಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇರಾನ್ ನಾಯಕತ್ವದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಇಂತಹ ಗೊಂದಲದ ಸಂದೇಶಗಳಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಯು ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗಿದ್ದು, ಗಲ್ಫ್ ರಾಷ್ಟ್ರಗಳು ಹೈ ಅಲರ್ಟ್ನಲ್ಲಿವೆ.