ಮಾಸ್ಕೋ, ಮಾ. 03 (DaijiworldNews/TA): ಅಮೇರಿಕಾ ಮತ್ತು ಇಸ್ರೇಲ್ ಸೇನೆಗಳು ಇರಾನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನ ಪರಿಸ್ಥಿತಿ ಜಾಗತಿಕ ವಿಮಾನಯಾನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ಇದರ ಪರಿಣಾಮ ಲಕ್ಷಾಂತರ ಪ್ರಯಾಣಿಕರು ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದು, ಅನೇಕ ಭಾರತೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿವಿಧೆಡೆ ಸಿಲುಕಿರುವ ಭಾರತೀಯರನ್ನು ಕರೆತರಲು ವಿಶೇಷ ವಿಮಾನ ಸಜ್ಜಾಗಿದೆ. 10 ಇಂಡಿಗೋ ಏರ್ಲೈನ್ಸ್ಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೊಂದೆಡೆ ವೈರಲ್ ಆಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮಾಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಮುಂಬೈ ಮೂಲದ ಇಂಜಿನಿಯರ್ ಸುನಿಲ್ ಗುಪ್ತಾ ತಮ್ಮ ಅಸಹಾಯಕ ಸ್ಥಿತಿಯನ್ನು ವೀಡಿಯೋ ಮೂಲಕ ಹೊರಹಾಕಿದ್ದಾರೆ. “ನನ್ನ ಬಳಿ ಊಟಕ್ಕೂ ಹಣವಿಲ್ಲ. ದಯವಿಟ್ಟು ಸಹಾಯ ಮಾಡಿ” ಎಂದು ಅವರು ಮನವಿ ಮಾಡಿದ್ದಾರೆ.
ಸುನಿಲ್ ಗುಪ್ತಾ ಅವರು ಇತಿಹಾದ್ ಏರ್ವೇಸ್ ಹಾಗೂ ಮೇಕ್ ಮೈ ಟ್ರಿಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನ್ಸೂಚನೆ ಇಲ್ಲದೆ ವಿಮಾನ ರದ್ದು ಮಾಡಲಾಗಿದೆ. ಯಾವುದೇ ವಸತಿ ಸೌಲಭ್ಯ ಅಥವಾ ಆಹಾರ ನೆರವು ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. “ರಷ್ಯಾದಲ್ಲಿ ನನ್ನ ವೀಸಾ ಅಥವಾ ಮಾಸ್ಟರ್ ಕಾರ್ಡ್ ಸ್ವೀಕರಿಸಲಾಗುತ್ತಿಲ್ಲ. ಊಟ, ನೀರಿಗೆ ಸಹ ಹಣವಿಲ್ಲ. ನಾನು ಇಲ್ಲಿ ಭಿಕ್ಷುಕನಂತೆ ನಿಂತಿದ್ದೇನೆ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಇರಾನ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಇದರಿಂದ ಸಾವಿರಾರು ವಿಮಾನಗಳು ರದ್ದಾಗಿವೆ. ಒಂದೇ ದಿನದಲ್ಲಿ 4000 ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿದ ಬಳಿಕ ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿದೆ ಎಂದು ತಿಳಿದುಬಂದಿದೆ. ಬಳಿಕ ಮೇಕ್ ಮೈ ಟ್ರಿಪ್ ಸಂಸ್ಥೆ ಸುನಿಲ್ ಗುಪ್ತಾ ಅವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಪ್ರಯಾಣಿಕರು ಎಚ್ಚರಿಕೆಯಿಂದ ಮುಂದಿನ ಪ್ರಯಾಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.