ಬರ್ಲಿನ್, ಡಿ. 18 (DaijiworldNews/AK): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜರ್ಮನಿ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ ಕುಸಿಯುತ್ತಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮ್ಯೂನಿಚ್ನಲ್ಲಿರುವ ಬಿಎಂಡಬ್ಲ್ಯೂಘಟಕಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿಯವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಭಾರತದಲ್ಲಿ ಉತ್ಪಾದನಾ ವಲಯವನ್ನು ಟೀಕಿಸುತ್ತಿರುವುದು ಕಂಡುಬಂದಿದೆ.
ಉತ್ಪಾದನೆಯು ಬಲವಾದ ಆರ್ಥಿಕತೆಯ ಬೆನ್ನೆಲುಬಾಗಿದೆ. ದುಃಖಕರ ವಿಚಾರವೆಂದರೆ ಭಾರತದಲ್ಲಿ ಉತ್ಪಾದನೆ ಕುಸಿಯುತ್ತಿದೆ. ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲು ಭಾರತಕ್ಕೆ ಉತ್ತಮ ಉತ್ಪಾದನಾ ವಾತಾವರಣದ ಅಗತ್ಯವಿದೆ. ಪ್ರಸ್ತುತ, ಭಾರತದಲ್ಲಿ ಉತ್ಪಾದನಾ ವಲಯವು ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ. ಇದು ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ತಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿಯವರು ಈ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಕಯಿಸಿ, ಕಳೆದ 10 ವರ್ಷಗಳಲ್ಲಿ ಒಟ್ಟು ಎಲೆಕ್ಟ್ರಾನಿಕ್ಸ್ ವಸ್ತಗಳ ತಯಾರಿಕೆಯಲ್ಲಿ 495% ರಷ್ಟು ಬೆಳವಣಿಗೆ ಮತ್ತು ರಫ್ತಿನಲ್ಲಿ 760% ರಷ್ಟು ಬೆಳವಣಿಗೆ ಕಂಡುಬಂದಿದೆ. 1991 ರಿಂದ ದೇಶೀಯ ವಾಹನಗಳ ಉತ್ಪಾದನೆಯು 14 ಪಟ್ಟು ಹೆಚ್ಚಾಗಿದೆ. ಇದಲ್ಲದೆ, ಭಾರತವು 2030ರ ವೇಳೆಗೆ 50 ಮಿಲಿಯನ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 2047 ರ ವೇಳೆಗೆ ಜಾಗತಿಕವಾಗಿ ಎರಡು ಅಗ್ರ ಆಟೋ ಉತ್ಪಾದನಾ ರಾಷ್ಟ್ರಗಳಲ್ಲಿ ಒಂದಾಗುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.