ದುಬೈ, ನ. 08 (DaijiworldNews/AA): ಅನಿವಾಸಿ ಕನ್ನಡಿಗರ ರಕ್ಷಣೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಚುನಾವಣೆಯ ವೇಳೆ ಅನಿವಾಸಿ ಕನ್ನಡಿಗರಿಗಾಗಿ ಘೋಷಿಸಿದ್ದ 'ಪ್ರತ್ಯೇಕ ಸಚಿವಾಲಯ' ಗ್ಯಾರಂಟಿಯನ್ನು ಯಾವಾಗ ಆರಂಭಿಸುತ್ತೀರಿ ಎಂದು ರಾಜ್ಯ ಸರಕಾರವನ್ನು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಪ್ರಶ್ನಿಸಿದ್ದಾರೆ.














ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ವಿಧಾನ ಪರಿಷತ್ ಗೆ ನೂತನ ಸದಸ್ಯೆಯಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಅವರಿಗಾಗಿ KNRI ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಹಾಗೂ ಕರ್ನಾಟಕ ಸಂಘ ದುಬೈನ ಅಧ್ಯಕ್ಷ ಶಶಿಧರ್ ನಾಗರಾಜಪ್ಪರವರ ನೇತೃತ್ವದಲ್ಲಿ ಯುಎಇಯ ಸುಮಾರು 36ಕ್ಕೂ ಹೆಚ್ಚು ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲಿನಲ್ಲಿ ಆಯೋಜಿಸಲಾಗಿದ್ದ ಅಭಿನಂದನೆ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊಲಾಸೊ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಅನಿವಾಸಿಗಳಿಗೆ ಪ್ರತ್ಯೇಕ ಸಚಿವಾಲಯದ ʼಗ್ಯಾರಂಟಿʼಯನ್ನು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬಂದು ಕೆಲವು ವರ್ಷಗಳೇ ಆದರೂ ಈ ಗ್ಯಾರಂಟಿಯನ್ನು ಇನ್ನೂ ಈಡೇರಿಸುವಲ್ಲಿ ಯಾಕೆ ವಿಳಂಬ? ಇನ್ನಾದರೂ ಈ ಬಗ್ಗೆ ಕ್ರಮಕೈಗೊಳ್ಳಿ ಎಂದರು.
ರಾಜ್ಯದಲ್ಲಿ ಈಗಾಗಲೇ ಆರತಿ ಕೃಷ್ಣ ನೇತೃತ್ವದ ಅನಿವಾಸಿ ಭಾರತೀಯ ವೇದಿಕೆ ಇದೆ, ಇದು ಸೀಮಿತ ಅಧಿಕಾರವನ್ನು ಹೊಂದಿದೆ. ಜೊತೆಗೆ ಖರ್ಚು ಮಾಡಲು ಬೇಕಾದಷ್ಟು ಬಜೆಟ್ ಕೂಡ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಕನ್ನಡಿಗರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದರು.
ಪ್ರಸಕ್ತ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸಲು, ಸಹಾಯಹಸ್ತವನ್ನು ನೀಡಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ. ಹಲವಾರು ವರ್ಷಗಳಿಂದ ಈ ಬಗ್ಗೆ ಒತ್ತಾಯ, ಒತ್ತಡವನ್ನು ಏರುತ್ತಿದ್ದರೂ ಇನ್ನೂ ಸಚಿವಾಲಯದ ಕನಸು ಈಡೇರಿಲ್ಲ. ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆಯ ಭರವಸೆ ಮಾತ್ರ ಸಿಗುತ್ತಿದೆ. ಇನ್ನು ನಾವು ಈ ಬಗ್ಗೆ ಸುಮ್ಮನೆ ಕೂರದೆ ಒಗ್ಗಟ್ಟಿನಿಂದ ಒತ್ತಾಯವನ್ನು ಮಾಡಬೇಕು. ರಾಜ್ಯ ಸರಕಾರ ಕೇರಳದ ಮಾದರಿಯಲ್ಲಿ ಕನ್ನಡಿಗರಿಗೂ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಕನ್ನಡಿಗರ ಕಷ್ಟ, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವೇದಿಕೆಯನ್ನು ಕಲ್ಪಿಸುವಂತೆ ಕೊಲಾಸೊ ಒತ್ತಾಯಿಸಿದರು.
ಈ ಕುರಿತು ಶೀಘ್ರವೇ ಒಂದು ನಿಯೋಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಭೇಟಿಯಾಗಿ ಪ್ರತ್ಯೇಕ ಸಚಿವಾಲಯವನ್ನು ಕೂಡಲೇ ಸ್ಥಾಪಿಸುವಂತೆ ಒತ್ತಾಯವನ್ನು ಮಾಡೋಣ, ಈ ನಿಯೋಗದೊಂದಿಗೆ ನಾನು ಕೂಡ ಕೈಜೋಡಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ಇಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳು ಒಂದುಗೂಡಿ ಮುನ್ನಡೆಯಬೇಕು. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂಥ ರಾಷ್ಟ್ರೀಯ ಹಬ್ಬ, ಕನ್ನಡ ರಾಜ್ಯೋತ್ಸವವನ್ನು ಎಲ್ಲ ಸಂಘಟನೆಗಳು ಒಂದೆಡೆ ಸೇರಿ ಜೊತೆಯಾಗಿ ಆಚರಿಸಬೇಕು. ಇದು ನಮ್ಮ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಮತ್ತು ನಮ್ಮ ಮಧ್ಯೆ ಸ್ನೇಹ, ಪ್ರೀತಿ-ವಿಶ್ವಾಸ, ಸಂಬಂಧವನ್ನು ಇಮ್ಮಡಿಗೊಳಿಸುತ್ತದೆ ಎಂದರು.
ಯುಎಇಯಲ್ಲಿ ಕನ್ನಡ ಭವನ; 5 ಕೋಟಿ ರೂ. ದೇಣಿಗೆ ಘೋಷಿಸಿದ ಕೊಲಾಸೊ
ಯುಎಇಯಲ್ಲಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಕನ್ನಡ ಭವನದ ಅಗತ್ಯತೆ ಇದ್ದು, ಈ ಬಗ್ಗೆ ರಾಜ್ಯ ಸರಕಾರ ನಮಗೆ ಸಹಾಯ-ಸಹಕಾರವನ್ನು ನೀಡಬೇಕು. ಕನ್ನಡ ಭವನ ನಿರ್ಮಿಸಲು ತಾನು 5 ಕೋಟಿ ರೂಪಾಯಿ ದೇಣಿಗೆ ನೀಡುತ್ತೇನೆ ಎಂದು ಕೊಲಾಸೊ ಘೋಷಿಸಿದರು. ಇದೇ ವೇಳೆ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕೂಡ 2.5 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆಯನ್ನು ಮಾಡಿದರು.
ಡಾ.ಆರತಿ ಕೃಷ್ಣ ಅವರನ್ನು ಅಭಿನಂದಿಸಿದ ಕೊಲಾಸೊ, ಕನ್ನಡಿಗರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸದಾ ಧ್ವನಿಯಾಗುತ್ತಿರುವ ಆರತಿ ಅವರ ಕಾರ್ಯ ವೈಖರಿ ನಿಜವಾಗಿಯೂ ಪ್ರಶಂಸನೀಯ, ಶ್ಲಾಘನೀಯ. ಅವರ ಸೇವೆ ಇನ್ನು ಇದೇ ರೀತಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಆರತಿ ಕೃಷ್ಣ, ಅಭಿನಂದನೆ ಹಾಗು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಅನಿವಾಸಿ ಕನ್ನಡಿಗರ ಕಷ್ಟ, ಸಮಸ್ಯೆ, ಸಂಕಷ್ಟಗಳಿಗೆ ಮುಂದಕ್ಕೂ ತಾನು ಧ್ವನಿಯಾಗಲಿದ್ದೇನೆ. ಸರಕಾರದ ಮಟ್ಟದ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಇನ್ನಷ್ಟು ಹೆಚ್ಚು ತಲುಪಿಸುವಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಕನ್ನಡ ಭವನ ನಿರ್ಮಾಣಕ್ಕೆ ಬೇಕಾದ ಸಹಾಯ-ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರಲ್ಲದೆ, ಎಲ್ಲ ಜಾತಿ-ಧರ್ಮದವರನ್ನು ಜೊತೆಗೂಸಿಡಿಕೊಂಡು ಯುಎಇಯಲ್ಲಿ ಸೌಹಾರ್ದತೆಯ ಕೊಂಡಿಯಾಗಿರುವ ಅಮರ್-ಅಕ್ಬರ್-ಅಂತೋನಿ ಎಂದೇ ಗುರುತಿಸಲಾಗುವ ಪ್ರವೀಣ್ ಕುಮಾರ್ ಶೆಟ್ಟಿ, ತುಂಬೆ ಮೊಯಿದಿನ್ ಹಾಗು ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿಯೇ ಈ ಕನ್ನಡ ಭವನ ನಿರ್ಮಾಣ ಆಗಲಿ ಎಂದು ಶುಭ ಹಾರೈಸಿದರು.
ದುಬೈ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅವರು ಡಾ.ಆರತಿ ಕೃಷ್ಣ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು. ಹಿದಾಯತ್ ಅಡ್ಡೂರು ಎಲ್ಲರನ್ನು ಸ್ವಾಗತಿಸಿದರು. ಶಶಿಧರ್ ನಾಗರಾಜಪ್ಪ ಕಾರ್ಯಕ್ರಮ ನಿರೂಪಿಸಿದರು.