ಮೈಸೂರು, ಜು. 14 (DaijiworldNews/AK): ಕಣ್ಣೀರಿನಿಂದ ನನ್ನ ಅಜ್ಜಿಯ ಮೇಲಿನ ಪ್ರೀತಿಯನ್ನು ಅಳೆಯಬೇಡಿ ಎಂದು ಎಸ್.ಜಾನಕಿ ಮೊಮ್ಮಗಳು ಅಪ್ಸರಾ ತಿರುಗೇಟು ನೀಡಿದ್ದಾರೆ.

ಅಜ್ಜಿ ಸಾವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಸ್.ಜಾನಕಿ ಮೊಮ್ಮಗಳು ಅಪ್ಸರಾ ಅವರ ದುಃಖವನ್ನು ಪ್ರಶ್ನಿಸಿದ್ದರು. ಸದ್ಯ ಈ ಬಗ್ಗೆ ಅಪ್ಸರಾ ಅವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ. 5 ಫೋಟೋ ಶೇರ್ ಮಾಡಿ, ಅಜ್ಜಿ ಜಾನಕಿ, ಸಹೋದರಿ ವರ್ಷಾ ನಂಟಿನ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ನನ್ನ ಅಜ್ಜಿಗೆ ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಯ ವ್ಯಕ್ತಿ ಎಂದರೆ ಅದು ನನ್ನ ಅಕ್ಕ, ವರ್ಷಾ. ಅವರಿಬ್ಬರೂ ಎಷ್ಟು ಒಂದೇ ತರಹ ಇದ್ದರೆಂದರೆ, ಮಾತುಗಳಿಂದಲೂ ವಿವರಿಸಲು ಸಾಧ್ಯವಾಗದ ರೀತಿಯಲ್ಲಿ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಿದ್ದರು.
ಇಂದು ನಾನು ನಿಂತಿರುವ ಜಾಗದಲ್ಲಿ ನಿಂತು, ಅಜ್ಜಿಯನ್ನು ನೋಡಿಕೊಳ್ಳುತ್ತಾ, ಈಗ ನನ್ನ ಮೇಲಿರುವ ಎಲ್ಲಾ ಜವಾಬ್ದಾರಿಗಳನ್ನು ಹೊರಬೇಕಾಗಿದ್ದವಳು ವರ್ಷಾ ಎಂಬುದನ್ನು ಈ ಜಗತ್ತು ಮರೆಯಬಾರದು ಎಂದು ಬಯಸುತ್ತೇನೆ. ಆದರೆ ಅವಳು 2023ರ ಆಗಸ್ಟ್ನಲ್ಲಿ ನಮ್ಮನ್ನಗಲಿದಳು. ಅವಳಗಲಿಕೆಯಿಂದ ನಮ್ಮ ಕುಟುಂಬ ಇಂದಿಗೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ದುಃಖ ಎಂದಿಗೂ ಮರೆಯಾಗುವುದಿಲ್ಲ. ಅದು ನಮ್ಮ ಜೀವನದುದ್ದಕ್ಕೂ ಜೊತೆಗಿಟ್ಟುಕೊಂಡು ಬದುಕುವನ್ನು ಕಲಿಯುತ್ತೇವೆ. ಈಗ ಅವರಿಬ್ಬರೂ ಒಂದಾಗಿದ್ದಾರೆ ಅನ್ನೋದು ಸಮಧಾನದ ವಿಷಯ.
ಕಳೆದ ಕೆಲವು ದಿನಗಳಿಂದ ಕೆಲವರು ನನ್ನ ದುಃಖವನ್ನು ಪ್ರಶ್ನಿಸುತ್ತಿದ್ದಾರೆ. ಕಣ್ಣೀರಿನಿಂದ ನನ್ನ ಅಜ್ಜಿ ಮೇಲಿನ ಪ್ರೀತಿಯನ್ನು ಅಳೆಯಬೇಡಿ. ಸಾವನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವುದನ್ನು ಹೇಳಿಕೊಟ್ಟಿದ್ದೇ ಅವರು. ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಅವರ ಮೇಲಿನ ಪ್ರೀತಿ ಯಾವತ್ತಿಗೂ ಕೊನೆಯಾಗುವುದಿಲ್ಲ ಅಂತ ತಿಳಿಹೇಳಿದ್ದರು. ನನ್ನ ಜೀವನದ ಅನುಭವಗಳು ನಾನು ಬಯಸಿರದಕ್ಕಿಂತ ಹೆಚ್ಚಾಗಿ ನನ್ನನ್ನು ಗಟ್ಟಿಯಾಗಿಸಿವೆ. ದುಃಖ ಯಾವಾಗಲೂ ಜೋರಾಗಿ ಅಳುವುದರಲ್ಲೇ ಇರಲ್ಲ. ಅದು ಕೆಲವೊಮ್ಮೆ ಮೌನವಾಗಿರುತ್ತದೆ.
ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದ ಮೇಲೆ ನಮ್ಮ ಬಗ್ಗೆ ಇಲ್ಲದ ಸಲ್ಲದ ವದಂತಿಗಳು ಮತ್ತು ಸುಳ್ಳು ಕಥೆಗಳು ಕೇಳಿಬರುವುದು ಸಹಜ. ಆದರೆ, ನಮ್ಮ ಕುಟುಂಬದ ಬಗ್ಗೆ ನಿಜ ಸಂಗತಿ ತಿಳಿಯದೇ ಜನರು ಸುಲಭವಾಗಿ ಒಂದು ತೀರ್ಮಾನಕ್ಕೆ ಬರುತ್ತಾರೆ. ಇದನ್ನು ನೋಡುವುದು ನಿಜಕ್ಕೂ ತುಂಬಾ ನೋವುಂಟು ಮಾಡುತ್ತದೆ.
ನನ್ನ ಅಜ್ಜಿ ನಿಜವಾಗಿಯೂ ಹೇಗಿದ್ದರು ಎಂಬುದು ಜನರಿಗೆ ತಿಳಿಯಬೇಕು. ಅವರು ಅತ್ಯಂತ ಸೌಮ್ಯವಾಗಿ, ದಯಾಮಯಿ, ನಮ್ರತೆಯಿಂದ ಮತ್ತು ಯಾರನ್ನೂ ಹೀಗೆ ಎಂದು ತಿರ್ಮಾನಿಸದ ಮುಗ್ಧ ಮನಸ್ಸಿನವರು. ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನೇ ನೋಡುತ್ತಿದ್ದರು. ವರ್ಷಾ ಕೂಡ ಹಾಗೇ ಇದ್ದಳು. ಎಲ್ಲದಕ್ಕಿಂತಲೂ ಹೆಚ್ಚಾಗಿ ಅವರಿಬ್ಬರಲ್ಲಿಯೂ ಮಗುವಿನಂತಹ ಮುಗ್ಧ ಹಾಗೂ ಉತ್ಸಾಹಭರಿತ ಸ್ವಭಾವವಿತ್ತು. ಅವರಿದ್ದ ಜಾಗದಲ್ಲೆಲ್ಲ ಹೊಸ ಕಳೆ ಇರುತ್ತಿತ್ತು. ಅವರನ್ನು ಭೇಟಿಯಾದ ಪ್ರತಿಯೊಬ್ಬರೂ ಇಷ್ಟಪಡುವಂತೆ ಮಾಡುತ್ತಿದ್ದರು. ಸದ್ಯ ಅವರಿಬ್ಬರೂ ಈಗ ಒಂದಾಗಿದ್ದಾರೆ ಎಂಬ ಆ ಒಂದು ಆಲೋಚನೆ ಈಗ ನನಗೆ ನೆಮ್ಮದಿಯನ್ನು ನೀಡುತ್ತಿದೆ ಎಂದಿದ್ದಾರೆ.