ಮುಂಬೈ, ಏ. 27 (DaijiworldNews/AK): ಕನ್ನಡದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ ಬಿಡುಗಡೆಗೂ ಮುನ್ನ ಸಖತ್ ವಿವಾದ ಮಾಡಿಕೊಂಡಿದೆ. ಈ ಸಿನಿಮಾದ ‘ಸರ್ಕೆ ಚುನಾರ್ ತೇರಿ ಸರ್ಕೆ’ ಹಾಡಿನಲ್ಲಿನ ಅಶ್ಲೀಲ ಸಾಹಿತ್ಯದ ಕಾರಣಕ್ಕೆ ಭಾರಿ ಟೀಕೆ ವ್ಯಕ್ತವಾಯಿತು.

ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಅವರು ಸೋಮವಾರ (ಏಪ್ರಿಲ್ 27) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿ ಕ್ಷಮೆ ಯಾಚಿಸಿದ್ದಾರೆ.
ಸೋಮವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿದ ಸಂಜಯ್ ದತ್ ಅವರು ಹಾಡಿನ ಸಾಹಿತ್ಯದ ಬಗ್ಗೆ ತಮಗೆ ಮೊದಲೇ ಅರಿವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ನಟನ ಪರ ವಕೀಲರು ಮಾತನಾಡಿ, ‘ಸಂಜಯ್ ದತ್ ಅವರು ಮಹಿಳೆಯರ ಮತ್ತು ಆಯೋಗದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಹಾಡನ್ನು ರೆಕಾರ್ಡ್ ಮಾಡುವಾಗ ಅದು ಬೇರೆ ಭಾಷೆಯಲ್ಲಿದ್ದ ಕಾರಣ ಸಾಹಿತ್ಯದ ಅರ್ಥ ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ, ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ಅವರು ಸ್ವಯಂಪ್ರೇರಿತರಾಗಿ ಬುಡಕಟ್ಟು ಸಮುದಾಯದ 50 ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.
ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಈ ಹಾಡಿನಲ್ಲಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದರು. ಹಾಡಿನ ಆರಂಭಿಕ ಸಾಲುಗಳು ಲೈಂಗಿಕತೆಯನ್ನು ಬಿಂಬಿಸುವ ದ್ವಂದ್ವಾರ್ಥದಿಂದ ಕೂಡಿದ್ದು, ಅತ್ಯಂತ ಅಶ್ಲೀಲವಾಗಿವೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಹಾಡಿನ ನೃತ್ಯ ಸಂಯೋಜನೆಯೂ ಕೂಡ ಆಕ್ಷೇಪಾರ್ಹವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.
ರಾಷ್ಟ್ರೀಯ ಮಹಿಳಾ ಆಯೋಗವು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಹಾಡು ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆ ಮತ್ತು ಪೋಕ್ಸೋ (POCSO) ಕಾಯ್ದೆಗಳ ನಿಬಂಧನೆಗಳನ್ನು ಉಲ್ಲಂಘಿಸುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆಯೋಗ ಹೇಳಿತ್ತು.