ಬೆಂಗಳೂರು, ಜ. 15 (DaijiworldNews/AA): ಸ್ಯಾಂಡಲ್ವುಡ್ ನಟಿ ಕಾರುಣ್ಯ ರಾಮ್ ಅವರು ಇದೀಗ ಸ್ವಂತ ತಂಗಿಯ ವಿರುದ್ಧವೇ ಆರ್ಆರ್ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ವಿರುದ್ಧ ದೂರು ನೀಡಿದ್ದಾರೆ. ತಮ್ಮ ಸಹೋದರಿ, ಮನೆಯಲ್ಲಿರುವ ಹಣ, ಚಿನ್ನವನ್ನೆಲ್ಲ ದುರುಪಯೋಗ ಪಡಿಸಿಕೊಂಡು, ಮನೆ ಬಿಟ್ಟು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಕಾರುಣ್ಯಾ ರಾಮ್ ಸಹೋದರಿ ಸಮೃದ್ಧಿ ರಾಮ್ ಅವರು ಮೇಕಪ್ ಕಲಾವಿದೆ ಆಗಿದ್ದರು. ಬಳಿಕ ಕೆಲವು ಧಾರಾವಾಹಿಗಳಲ್ಲಿ ಕೂಡ ನಟಿಸಿದರು. ಆದರೆ ನಟನೆಯಲ್ಲಿ ಅವರು ಹೆಸರು ಮಾಡಲು ಸಾಧ್ಯವಾಗದೆ ಕೊನೆಗೆ ಉದ್ಯಮವೊಂದನ್ನು ಪ್ರಾರಂಭಿಸಿದ್ದರು.
"ತಮ್ಮ ಅವರ ಸಹೋದರಿ ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದು, ಬೆಟ್ಟಿಂಗ್ನಿಂದಾಗಿ ಸುಮಾರು 25 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಬೆಟ್ಟಿಂಗ್ ಆಡಿ ಕಳೆದುಕೊಂಡ ಹಣ ತುಂಬಲು ಖಾಸಗಿ ವ್ಯಕ್ತಿಗಳಿಂದ ಅಧಿಕ ಬಡ್ಡಿಗೆ ಸಾಲ ಪಡೆದುಕೊಂಡಿದ್ದಾರೆ. ಅಷ್ಟು ಮಾತ್ರವೇ ಅಲ್ಲದೆ, ಮನೆಯಲ್ಲಿದ್ದ ಲಕ್ಷಾಂತರ ರೂ. ಹಣ ಮತ್ತು ಚಿನ್ನದ ಒಡವೆಗಳನ್ನು ಸಹ ಬಳಸಿ ಹಣ ಪಡೆದು ಬೆಟ್ಟಿಂಗ್ ಆಡಿ ಹಾಳು ಮಾಡಿದ್ದಾರೆ. ಮನೆಯವರು, ಹಣ ಮತ್ತು ಚಿನ್ನದ ಬಗ್ಗೆ ಪ್ರಶ್ನೆ ಮಾಡಿದಾಗ ಸಮೃದ್ಧಿ ಮನೆ ಬಿಟ್ಟು ಹೋಗಿದ್ದಾರೆ ಎಂದು ನಟಿ ಕಾರುಣ್ಯ ರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೀಗ ಸಮೃದ್ಧಿಗೆ ಸಾಲ ನೀಡಿದವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಹ ಏನೇ ಪೋಸ್ಟ್ ಹಾಕಿದರು ಅಶ್ಲೀಲ ಸಂದೇಶಗಳನ್ನು, ಬೆದರಿಕೆ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂದು ಕಾರುಣ್ಯ ರಾಮ್ ಆರೋಪಿಸಿದ್ದಾರೆ. ಕಾರುಣ್ಯ ಅವರು ಸಹೋದರಿ ಸಮೃದ್ಧಿಯ ಜೊತೆಗೆ ಪ್ರತಿಭಾ, ರಕ್ಷಿತ್, ಪ್ರಜ್ವಲ್, ಸಾಗರ್ ಎಂಬುವರ ವಿರುದ್ಧವೂ ನಟಿ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.