ಮಥುರಾ, ಡಿ. 31 (DaijiworldNews/AA): ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

"ನಾವು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಪತ್ರ ಬರೆದಿದ್ದೇವೆ. ಇದು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಇಲ್ಲಿ ಶ್ರೀಕೃಷ್ಣ ಲೀಲೆ ಪ್ರದರ್ಶನ ನಡೆಯುತ್ತದೆ. ಜೊತೆಗೆ, ಪ್ರಾರ್ಥನೆ ಸಲ್ಲಿಸಲು ಧರ್ಮಗುರುಗಳು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಸನ್ನಿ ಲಿಯೋನ್ ಅವರನ್ನು ಕರೆಸಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದು ದಿನೇಶ್ ಹೇಳಿದ್ದಾರೆ.
"ಸನ್ನಿ ಲಿಯೋನ್ ಅವರನ್ನು ಮಥುರಾಕ್ಕೆ ಆಹ್ವಾನಿಸುವ ಮೂಲಕ ಕೆಲವರು ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡಲು ಬಯಸುತ್ತಿದ್ದಾರೆ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ನ ದಿನೇಶ್ ಫಲಹರಿ ತಿಳಿಸಿದ್ದಾರೆ. ಸನ್ನಿ ಲಿಯೋನ್ ಅವರು ಅಶ್ಲೀಲತೆಯನ್ನು ಪ್ರಚಾರ ಮಾಡುತ್ತಾರೆ. ಅಂತವರನ್ನು ಬ್ರಿಜ್ ಭೂಮಿಯಿಂದ ದೂರವಿಡಬೇಕು" ಎಂದಿದ್ದಾರೆ.
"ಜನವರಿ 1ರಂದು ನಡೆಯಲಿದ್ದ ಲೈವ್ ಡಿಜೆ ಪ್ರದರ್ಶನದಲ್ಲಿ ಸನ್ನಿ ಲಿಯೋನ್ ಭಾಗವಹಿಸಬೇಕಿತ್ತು. ಆದರೆ, ಮಠಾಧೀಶರು ಮತ್ತು ಭಕ್ತಾದಿಗಳ ಭಾವನೆಗಳನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದ್ದು, ಟಿಕೆಟ್ ದರ ಮರುಪಾವತಿ ಮಾಡುತ್ತಿದ್ದೇವೆ" ಎಂದು ಆಯೋಜಕರಲ್ಲಿ ಒಬ್ಬರಾದ ಮಿಥುಲ್ ಪಾಠಕ್ ಮಾಹಿತಿ ನೀಡಿದ್ದಾರೆ.