ನವದೆಹಲಿ, ಅ. 31 (DaijiworldNews/AA): ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಇಬ್ಬರು ವ್ಯಕ್ತಿಗಳು ಕೊಂದಿದ್ದಾರೆ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾಸಿಂಗ್ ತಿಳಿಸಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಅಮೆರಿಕ ಮತ್ತು ಮುಂಬೈನ ಇಬ್ಬರು ಮನಶಾಸ್ತ್ರಜ್ಞರು ನನ್ನನ್ನು ಸಂಪರ್ಕಿಸಿ, ಸುಶಾಂತ್ ಅವರ ಸಾವಿನ ಹಿಂದೆ ಸಂಚು ಇದೆ ಎಂದು ಹೇಳಿದ್ದಾರೆ. ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದಕ್ಕೆ ಹಲವು ಸಾಕ್ಷ್ಯಗಳಿವೆ. ಅವನು ನೇಣು ಹಾಕಿಕೊಳ್ಳಲು ಫ್ಯಾನ್ ಮತ್ತು ಹಾಸಿಗೆಯ ಮಧ್ಯೆ ಅಷ್ಟು ಅಂತರವೇ ಇರಲಿಲ್ಲ. ಅಲ್ಲಿ ಸ್ಟೂಲ್ ಕೂಡ ಇರಲಿಲ್ಲ. ಹಾಗಾದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
"ಇನ್ನೂ ಸುಶಾಂತ್ ಕುತ್ತಿಗೆಯ ಮೇಲಿದ್ದ ಗುರುತುಗಳು ಬಟ್ಟೆಯಿಂದ ಮೂಡಿದಂತಿರಲಿಲ್ಲ, ಬದಲಾಗಿ ಸರಪಳಿಯಂತಿದ್ದವು. ಈ ಒಂದು ಸಾಕ್ಷಿಯಿಂದಲೇ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುವುದನ್ನು ನಾನು ನಂಬಲಿಲ್ಲ. ನನ್ನನ್ನು ಸಂಪರ್ಕಿಸಿದ ಇಬ್ಬರು ಮನಶ್ಶಾಸ್ತ್ರಜ್ಞರು ಕೂಡ ಸುಶಾಂತ್ಗೆ ಪರಿಚಯವಿರಲಿಲ್ಲ. ಆದರೆ ಇಬ್ಬರೂ ಹೇಳಿದ್ದು ಒಂದೇ ಸುಶಾಂತ್ನ್ನು ಇಬ್ಬರು ವ್ಯಕ್ತಿಗಳು ಕೊಂದಿದ್ದಾರೆ" ಎಂದು ಹೇಳಿದ್ದಾರೆ.
"ಸುಶಾಂತ್ ಅನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸಲಾಗಿದೆ. ನನ್ನ ಸಹೋದರ ಎಲ್ಲ ವಿಷಯದಲ್ಲಿಯೂ ಮುಂದೆ ಇದ್ದ. ಬಾಲಿವುಡ್ನಲ್ಲಿಯೂ ವೇಗವಾಗಿ ಎತ್ತರಕ್ಕೆ ಬೆಳೆದ. ಅದನ್ನು ಎಲ್ಲರಿಗೂ ಸಹಿಸಲಾಗಲಿಲ್ಲ, ಹೀಗಾಗಿ ಇದೆಲ್ಲವನ್ನು ನಿಲ್ಲಿಸಲು ಯಾರೋ ಸಂಚು ರೂಪಿಸಿದ್ದರು" ಎಂದಿದ್ದಾರೆ.