ಬೆಂಗಳೂರು, ಅ. 30(DaijiworldNews/ AK):ಕರ್ನಾಟಕ ಸರ್ಕಾರ ನೀಡುವ ಡಾ ರಾಜ್ಕುಮಾರ್ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ.

ಹಿರಿಯ ನಟಿ ಉಮಾಶ್ರೀ ಅವರಿಗೆ ಡಾ ರಾಜ್ಕುಮಾರ್ ಪ್ರಶಸ್ತಿಯನ್ನು ನೀಡಲಾಗಿದೆ. 2019ನೇ ಸಾಲಿನ ಡಾ ರಾಜ್ಕುಮಾರ್ ಪ್ರಶಸ್ತಿ ಇದಾಗಿದೆ. ಉಮಾಶ್ರೀ ಅವರು ಇಷ್ಟು ವರ್ಷ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ, ಅವರ ಅತ್ಯುತ್ತಮ ನಟನೆಯನ್ನು ಗುರುತಿಸಿ ರಾಜ್ಕುಮಾರ್ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ನಟ ರಿಚರ್ಡ್ ಕ್ಯಾಸ್ಟಲಿನೋ ಅವರನ್ನು ಆಯ್ಕೆ ಮಾಡಲಾಗಿದೆ. ರಿಚರ್ಡ್ ಕ್ಯಾಸ್ಟಲಿನೋ ಅವರು ಕನ್ನಡ, ತುಳು, ಕೊಂಕಣಿ ಸಿನಿಮಾಗಳಲ್ಲಿ ವರ್ಷಗಳ ಕಾಲ ನಟಿಸಿದ್ದಾರೆ. ಇನ್ನು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್ಆರ್ ನಂಜುಂಡೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳು ಐದು ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಚಿನ್ನ ಲೇಪಿತ ಪದಕವನ್ನು ಸಹ ಒಳಗೊಂಡಿರಲಿವೆ.
ಈ ಪ್ರಶಸ್ತಿಗಳ ಜೊತೆಗೆ ಬೆಳ್ಳಿ ತೊರೆಗೆ ಉತ್ತಮ ಸಿನಿಮಾ ಪ್ರಬಂಧ ಮತ್ತು ‘ಗುಳೆ’ ಸಿನಿಮಾಕ್ಕೆ ಉತ್ತಮ ಕಿರುಚಿತ್ರ ಪ್ರಶಸ್ತಿಗಳನ್ನು ಸಹ ಸರ್ಕಾರ ಘೋಷಿಸಿದೆ. ಈ ಪ್ರಶಸ್ತಿಗಳು 25 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕಗಳನ್ನು ಒಳಗೊಂಡಿರಲಿವೆ.
ಇದೇ ದಿನ ರಾಜ್ಯೋತ್ಸವ ಪ್ರಶಸ್ತಿಗಳು ಸಹ ಘೋಷಣೆ ಆಗಿದ್ದು ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಖ್ಯಾತ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರೈ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಅವರ ಜೊತೆಗೆ ವಿಜಯಲಕ್ಷ್ಮಿ ಸಿಂಗ್ ಅವರನ್ನೂ ಸಹ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.