ಬೆಂಗಳೂರು, ಅ. 29 (DaijiworldNews/AK):ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ರಾಜ್ಕುಮಾರ್ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಕಂಠೀರವ ಸ್ಟುಡಿಯೋಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್ ರಾಘಣ್ಣ ದಂಪತಿ, ಯುವ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಸೇರಿದಂತೆ ಕುಟುಂಬಸ್ಥರು ಆಗಮಿಸಿ, ಪೂಜೆಗೆ ಸಿದ್ಧತೆ ಮಾಡಿಕೊಂಡು ಬಳಿಕ ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ನೆರವೇರಿಸಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜೈಕಾರ ಹಾಕುತ್ತಿದ್ದರು.
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಕುಟುಂಬಸ್ಥರು ಪಾರ್ವತಮ್ಮ ಹಾಗೂ ಡಾ. ರಾಜ್ಕುಮಾರ್ ಸಮಾಧಿಗೆ ಪೂಜೆ ಮಾಡಿದ್ದಾರೆ. ಪುನೀತ್ ಸಮಾಧಿಗೆ ಬಿಳಿ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ, ನೇತ್ರದಾನ ಶಿಬಿರವನ್ನು ಅಭಿಮಾನಿಗಳು ಅಯೋಜಿಸಿದ್ದಾರೆ.