ಅಮರಾವತಿ, ಜೂ. 24 (DaijiworldNews/AA): ಬಾಲಿವುಡ್ ಸಿನಿಮಾಗಳನ್ನು ಕೋಡಂಗಿತನಕ್ಕೆ ಹೋಲಿಸಿರುವ ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್, ಬಾಲಿವುಡ್ ಕೇವಲ ಹಣಕ್ಕಾಗಿ ಸಿನಿಮಾ ಮಾಡುತ್ತಿದೆ. ಭಾರತೀಯತೆಯನ್ನು ಗೌರವಿಸುತ್ತಾ, ಸಂಸ್ಕೃತಿಯೊಂದಿಗೆ ಸಂಬಂಧ ಇರಿಸಿಕೊಂಡಿರುವುದು ದಕ್ಷಿಣ ಭಾರತ ಚಿತ್ರರಂಗ ಮಾತ್ರ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಅಭಿಪ್ರಯಾ ವ್ಯಕ್ತಪಡಿಸಿರುವ ಅವರು, "ಬೇರೆ ಬೇರೆ ಜನರೇಷನ್ನ ಸಿನಿಮಾ ನಿರ್ಮಾಪಕ, ನಿರ್ದೇಶಕರು ಬಂದು ಬಾಲಿವುಡ್ನ ಚಿತ್ರಣವೇ ಬದಲಾಗಿದೆ. ಬಾಲಿವುಡ್ ತನ್ನ ಕೋಡಂಗಿತ ತೋರಿಸಿ, ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ, ಹಣದ ಆಸೆಗೆ ಸಂಸ್ಕೃತಿಗೆ ಹೊರತಾದ ಪಾತ್ರಗಳನ್ನು ಸೃಷ್ಟಿಸಿತು, ಸಂಸ್ಕೃತಿಗೆ ಸಂಬಂಧವಿಲ್ಲದ ಪರ ಸಂಸ್ಕೃತಿಯ ಸಿನಿಮಾಗಳನ್ನು ನಿರ್ಮಿಸಿದೆ" ಎಂದು ಹೇಳಿದರು.
"ಈ ದಿನಗಳಲ್ಲಿ ಬಾಲಿವುಡ್ಗೆ ಹೋಲಿಸಿದರೆ ದಕ್ಷಿಣ ಭಾರತ ಚಿತ್ರರಂಗ ಸತತವಾಗಿ ನೆಲದ ಸಂಸ್ಕೃತಿಗೆ, ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದೆ. ಈ ಹಿಂದೆ ಬಾಲಿವುಡ್ನಲ್ಲಿ ಇಂಥಹಾ ಪ್ರಯತ್ನಗಳು ನಡೆದಿದ್ದವು. ಉದಾಹರಣೆಗೆ ಆಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾ. ಅದು ಭಾರತೀಯತೆಯನ್ನು ಒಳಗೊಂಡ ಸಿನಿಮಾ ಆಗಿತ್ತು. ಅದರೆ ಇತ್ತೀಚೆಗೆ ಬಾಲಿವುಡ್ ಅಂಥಹಾ ಸಿನಿಮಾಗಳನ್ನು ಮಾಡುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ಯಾನ್ ಇಂಡಿಯಾ ಸಂಸ್ಕೃತಿ ಹೆಚ್ಚಾದ ಬಳಿಕ ಭಾರತದ ಎಲ್ಲ ಚಿತ್ರರಂಗವನ್ನೂ ಸೇರಿಸಿ 'ಭಾರತೀಯ ಚಿತ್ರರಂಗ' ಎಂದು ಕರೆಯಲಾಗುತ್ತಿದೆ. ಈ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿರುವ ಅವರು, "ಭಾರತದ ಪ್ರತಿಯೊಂದು ಚಿತ್ರರಂಗಕ್ಕೂ ಅದರದ್ದೇ ಆದ ಭಿನ್ನತೆ, ವಿಶೇಷತೆಗಳಿವೆ. ಅವು ಹಾಗೆಯೇ ಉಳಿಯಬೇಕು. 'ಭಾರತೀಯ ಚಿತ್ರರಂಗ' ಎಂದು ಆ ಭಿನ್ನತೆಯನ್ನು ಹಾಳು ಮಾಡಬಹುದಾಗಿದೆ" ಎಂದಿದ್ದಾರೆ.