ಹೈದರಾಬಾದ್, ಮೇ. 29 (DaijiworldNews/AA): 'ಪುಷ್ಪ 2' ಸಿನಿಮಾದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅವರು 'ಅತ್ಯುತ್ತಮ ನಟ' ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ತೆಲಂಗಾಣ ರಾಜ್ಯ ಸರ್ಕಾರ 'ಗದ್ದರ್ ಸಿನಿಮಾ ಪ್ರಶಸ್ತಿ' ಘೋಷಣೆ ಮಾಡಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ತೆಲುಗಿನಲ್ಲಿ ರಾಜ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೊದಲು ಅವಿಭಜಿತ ಆಂಧ್ರ ಪ್ರದೇಶ ನೀಡುತ್ತಿದ್ದ ನಂದಿ ಪ್ರಶಸ್ತಿಯನ್ನು ಈಗ ತೆಲಂಗಾಣ ಸರ್ಕಾರ 'ಗದ್ದರ್ ಅವಾರ್ಡ್' ಎಂದು ಮರು ನಾಮಕರಣ ಮಾಡಲಾಗಿದೆ. ಇದೀಗ 2024ರ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಗದ್ದರ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
15 ಜ್ಯೂರಿ ಸದಸ್ಯರು ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, ಫೀಚರ್ ಫಿಲ್ಮ್, ಸಾಕ್ಷ್ಯಚಿತ್ರ, ಮಕ್ಕಳ ಸಿನಿಮಾ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಸಿನಿಮಾಗೆ 'ಅತ್ಯುತ್ತಮ ಸಿನಿಮಾ' ಪ್ರಶಸ್ತಿ ನೀಡಲಾಗಿದೆ. ಈ ಸಿನಿಮಾದ ನಿರ್ದೇಶನಕ್ಕಾಗಿ ನಾಗ್ ಅಶ್ವಿನ್ ಅವರಿಗೆ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಲಭಿಸಿದೆ.
ಅವಾರ್ಡ್ ಘೋಷಣೆಯಾದ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಅವರು ಟ್ವೀಟ್ ಮಾಡಿದ್ದು, 'ಈ ಪ್ರಶಸ್ತಿ ಸಿಕ್ಕಿರುವುದು ನನಗೆ ಗೌರವ ತಂದಿದೆ. ಈ ಪ್ರತಿಷ್ಠಿತ ಗೌರವಕ್ಕಾಗಿ ತೆಲಂಗಾಣ ಸರ್ಕಾರಕ್ಕೆ ಧನ್ಯವಾದಗಳು. ನಿರ್ದೇಶಕ ಸುಕುಮಾರ್, ನಿರ್ಮಾಪಕರು ಹಾಗೂ ಇಡೀ ಪುಷ್ಪ 2 ಸಿನಿಮಾ ತಂಡಕ್ಕೆ ಈ ಕ್ರೆಡಿಟ್ ಸಲ್ಲುತ್ತದೆ. ಅಭಿಮಾನಿಗಳಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ. ನಿಮ್ಮ ಬೆಂಬಲ ನನಗೆ ಸ್ಫೂರ್ತಿ ತುಂಬುತ್ತದೆ' ಎಂದು ತಿಳಿಸಿದ್ದಾರೆ.